ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸತ್ಯವಾದುದು. ಆರೋಗ್ಯವು ಅನಾರೋಗ್ಯವಾದಾಗ ಔಷಧ ನೀಡಿ ಗುಣಪಡಿಸುವದು ವೈದ್ಯ ವೃತ್ತಿಧರ್ಮ ಎಂದು ಗದಗ ಜೇಂಟ್ಸ್ ಗ್ರುಪ್ ಆಫ್ ಸಖೀಸಹೇಲಿ ಸಂಘದ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.
ಅವರು ಗದುಗಿನ ಖ್ಯಾತ ಚಿಕ್ಕಮಕ್ಕಳ ತಜ್ಞರಾದ ಡಾ. ಎಸ್.ಎಫ್. ವರವಿ ಅವರನ್ನು ‘ವೈದ್ಯ ದಿನಾಚರಣೆ’ ಪ್ರಯುಕ್ತ ಸನ್ಮಾನಿಸಿ ಮಾತನಾಡಿದರು.
ನೋವಿನ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಪುನರ್ಜನ್ಮ ನೀಡುವ ವೈದ್ಯರು ನಮ್ಮೆಲ್ಲರ ಪಾಲಿನ ದೇವರು. ಇವರಿಗೆ ವಿಶೇಷ ಗೌರವ ನೀಡುವ ಮೂಲಕ ವೈದ್ಯರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನಮ್ಮ ಉತ್ತಮ ಹಾಗೂ ಆರೋಗ್ಯಕರ ಬದುಕಿಗಾಗಿ ಸಮರ್ಪಣಾ ಮನೋಭಾವದಲ್ಲಿ ಕಳೆದ 40 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ವರವಿ ಅವರ ಸೇವೆ ಅಭಿನಂದನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿರ್ಮಲಾ ಪಾಟೀಲ, ವೈದ್ಯರು ಭೂಮಿಯ ಮೇಲಿರುವ ದೇವರು ಎನ್ನುವ ನಂಬಿಕೆ ನಮ್ಮಲ್ಲಿದೆ. ನಿಸ್ವಾರ್ಥ ಸೇವೆಯನ್ನೇ ಗುರಿಯಾಗಿಸಿಕೊಂಡು ನಿರಂತರ ಸೇವೆಗೈಯುತ್ತಿರುವ ವೈದ್ಯರು ರೋಗಿಗಳ ಬದುಕಿನ ಆಶಾಕಿರಣ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ವರವಿ, ವೈದ್ಯಕೀಯ ಕ್ಷೇತ್ರದಲ್ಲಿ ಹಗಲಿರುಳು ಸೇವೆ ಸಲ್ಲಿಸಿ ನೋವು ಎಂದು ಬಂದವರ ಮುಖದಲ್ಲಿ ನಗು ತರಿಸುವ ಕಾರ್ಯ ನಿರಂತರ ನಡೆಯುತ್ತಿದೆ. ನೋವು ಕಡಿಮೆ ಆದಾಗ ನಮ್ಮೊಂದಿಗೆ ರೋಗಿಗಳು ಸಂತಸ ಹಂಚಿಕೊಂಡು ಆರೋಗ್ಯವಂತರಾಗಿ ನಡೆದಾಗ ನಮ್ಮ ವೃತ್ತಿ ಘನತೆ ಹೆಚ್ಚುತ್ತದೆ ಎಂದರು.
ಮಾಧುರಿ ಮಾಳೇಕೊಪ್ಪ ಹಾಗೂ ಶಶಿಕಲಾ ಮಾಲೀಪಾಟೀಲ ಪ್ರಾರ್ಥಿಸಿದರು. ಪ್ರಿಯಾಂಕಾ ಹಳ್ಳಿ ಸ್ವಾಗತಿಸಿದರು. ಆಶಾ ಪಟ್ಟಣಶೆಟ್ಟಿ ಪರಿಚಯಿಸಿದರು. ಅಶ್ವಿನಿ ಮಾದಗುಂಡಿ ನಿರೂಪಿಸಿದರು. ಚಂದ್ರಕಲಾ ಸ್ಥಾವರಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ರೇಖಾ ರೊಟ್ಟಿ, ಅನ್ನಪೂರ್ಣ ವರವಿ, ಶಾಂತಾ ಮುಂದಿನಮನಿ, ಲಕ್ಷ್ಮೀ ಕಟ್ಟೇಣ್ಣವರ, ಯಲ್ಲಮ್ಮ ಬೇಲೇರಿ, ಗೀತಾ ಮಠದ, ನಿವೇದಿತಾ ಅಡ್ನೂರ, ವಿಜಯಲ ಲಕ್ಷ್ಮೀ ಬಾರಿಕಾಯಿ, ಹೇಮಾ ಬಿ, ಜಯಶ್ರೀ ಕುರುಬರ ಮುಂತಾದವರಿದ್ದರು.