ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುರಾಣದಲ್ಲಿ ನಾವು ಧನ್ವಂತರಿ ಬಗ್ಗೆ ಓದಿದ್ದೇವೆ, ಕೇಳಿ ತಿಳಿದಿದ್ದೇವೆ. ಅವರಲ್ಲಿ ಎಂತಹ ರೋಗವನ್ನಾದರೂ ಶಮನ ಮಾಡುವ ಶಕ್ತಿ ಇತ್ತೆಂಬುದನ್ನು ಅರಿತಿದ್ದೇವೆ. ಆದರೆ ಈಗಿನ ವೈದ್ಯರು ಕಲಿಯುಗದ ಧನ್ವಂತರಿಗಳಾಗಿದ್ದು, ನಮ್ಮೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿನ ಶ್ರೀ ಅನ್ನದಾನೇಶ್ವರ ವಿದ್ಯಾ ಸಂಸ್ಥೆಯ ಕ್ಯಾಂಪಸ್ನಲ್ಲಿ ಶ್ರೀ ಅನ್ನದಾನೇಶ್ವರ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಸಂಸ್ಥೆಯ ವಸತಿ ನಿಲಯದಲ್ಲಿ ಸುಮಾರು ಎರಡರಿಂದ ಎರಡೂವರೆ ಸಾವಿರ ವಿದ್ಯಾರ್ಥಿಗಳು ಇದ್ದು ಓದುತ್ತಿದ್ದಾರೆ. ಅವೇಳೆಯಲ್ಲಿ ಅವರಿಗೇನಾದರೂ ತೊಂದರೆಯಾದರೆ, ಬಿಡುವಿನ ವೇಳೆಯಲ್ಲಿ ಹುಷಾರು ತಪ್ಪಿದರೆ ಅವರನ್ನು ನರೇಗಲ್ಲಿಗೆ ಕರೆದುಕೊಂಡು ಹೋಗಬೇಕಿತ್ತು. ಈ ಕಷ್ಟವನ್ನು ಮನಗಂಡು ನಮ್ಮ ಕ್ಯಾಂಪಸ್ಸಿನಲ್ಲಿಯೇ ಒಂದು ಆಸ್ಪತ್ರೆಯನ್ನು ತೆರೆಯಬೇಕೆಂದು ಯೋಚಿಸಿ ಇಂದು ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದೇವೆ. ನರೇಗಲ್ಲದ ಖ್ಯಾತ ವೈದ್ಯರು, ಯುವ ವೈದ್ಯರು ಇಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ. ಬಾಲಕರಿಗಾಗಿ ಮತ್ತು ಬಾಲಿಕೆಯರಿಗಾಗಿ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಈ ವೇಳೆ ಡಾ. ಕೆ.ಬಿ. ಧನ್ನೂರ, ಡಾ. ಜಿ.ಕೆ. ಕಾಳೆ, ಡಾ. ಶಿವಯ್ಯ ರೋಣದ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ, ವಿ.ಬಿ. ಸೋಮನಕಟ್ಟಿಮಠ, ಬಿ.ಜಿ. ವೀರಾಪೂರ, ಎಂ.ಎಸ್. ದಢೇಸೂರಮಠ, ಪ್ರಾಚಾರ್ಯರಾದ ವೈ.ಸಿ. ಪಾಟೀಲ, ಅನಸೂಯಾ ಪಾಟೀಲ, ಬಂಡಿಹಾಳ, ಮುಖ್ಯ ಶಿಕ್ಷಕರಾದ ಎಂ.ಬಿ. ಸಜ್ಜನ, ಎಂ.ವಿ. ವೀರಾಪೂರ, ಸಂಗಮೇಶ ಹೂಲಗೇರಿ, ಎಸ್ಎವಿವಿಪಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.