ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಅಕ್ಕನ ಬಳಗ ನಿರ್ಮಿಸುತ್ತಿರುವ ಸಂಸ್ಕೃತಿ ಸಮುದಾಯ ಭವನಕ್ಕೆ ಅಕ್ಕನ ಬಳಗದ ಟ್ರಸ್ಟಿ ಶಾಂತಾ ಅಂದಾನಪ್ಪ ಗೌಡರ 11 ಲಕ್ಷ ರೂ.ಗಳ ದೇಣಿಗೆಯ ಚೆಕ್ನ್ನು ಅಕ್ಕನ ಬಳಗದ ಮಾಸಿಕ ಕಾರ್ಯಕ್ರಮದಲ್ಲಿ ಸಮರ್ಪಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕಪ್ಪತ್ತಗಿರಿಯ ನಂದಿವೇರಿ ಸಂಸ್ಥಾನಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಶಾಂತಕ್ಕ ಅವರು ಬಹು ದೊಡ್ಡ ಮೊತ್ತದ ದೇಣಿಗೆಯನ್ನು ನೀಡುವ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಚೆಕ್ನ್ನು ಸ್ವೀಕರಿಸಿ ಅಕ್ಕನ ಬಳಗದ ಹಿರಿಯ ಟ್ರಸ್ಟಿಗಳಾಗಿರುವ ಶಾಂತಕ್ಕ ಅಂದಾನಪ್ಪ ಗೌಡರ ಅವರ ದಾನಗುಣವನ್ನು ಕೊಂಡಾಡಿ, ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಹಾಗೂ ಇಳಿ ವಯಸ್ಸಿನಲ್ಲಿ ದೊಡ್ಡ ಮೊತ್ತದ ಹಣವನ್ನು ಸ್ವಯಂ ಪ್ರೇರಣೆಯಿಂದ ನೀಡಿರುವದು ಅಭಿನಂದನೀಯ. ದೇಣಿಗೆ ಸಾರ್ಥಕತೆಯನ್ನು ಪಡೆದುಕೊಂಡಿದೆ ಎಂದು ಬಣ್ಣಿಸಿದರು.
ಶಾಂತಾ ಅಂದಾನಪ್ಪ ಗೌಡರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ಅಕ್ಕನ ಬಳಗದ ಕಾರ್ಯದರ್ಶಿ ಜಯಶ್ರೀ ಪಾಟೀಲ, ಖಜಾಂಚಿ ಶಿವಲೀಲಾ ಹಿರೇಮಠ, ಮೃತ್ಯುಂಜಯ ಸಂಕೇಶ್ವರ ಉಪಸ್ಥಿತರಿದ್ದರು.
ಡಾ. ಅನಂತ ಶಿವಪೂರ, ಡಾ. ವಾಣಿ ಶಿವಪೂರ, ಡಾ. ಮಹಾಂತೇಶ ಬಾತಾಖಾನಿ, ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ ಸೇರಿದಂತೆ ಎಲ್ಲ ಟ್ರಸ್ಟಿಗಳು ಹಾಗೂ ಸದಸ್ಯರು, ಗಣ್ಯರಿದ್ದರು.