ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ದಾನಗಳಲ್ಲಿ ಅನ್ನದಾನ, ವಿದ್ಯಾದಾನ ಹೇಗೆ ಮಹತ್ವವೋ, ಹಾಗೆಯೆ ಶೈಕ್ಷಣಿಕ ಸಂಸ್ಥೆಗಳಿಗೆ ಗ್ರಂಥ ದಾನವೂ ಮುಖ್ಯವಾಗಿದೆ. ಇದರಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಇಂತಹ ಮಹತ್ತರ ದಾನವನ್ನು ಇಂದು ನಮ್ಮ ಶ್ರೀ ಅನ್ನದಾನೇಶ್ವರ ಪ.ಪೂ ಮಹಾವಿದ್ಯಾಲಯಕ್ಕೆ ನೀಡಿರುವ ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿಯವರ ಕಾರ್ಯ ಶ್ಲಾಘನೀಯ ಎಂದು ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿಯವರು ನೀಡಿದ ಗ್ರಂಥ ದಾನವನ್ನು ಸ್ವೀಕರಿಸಿದ ನಂತರ ಗೌಡರ ಮಾತನಾಡಿದರು.
ಇಂದು ಸ್ವೀಕೃತಗೊಂಡ ಎಲ್ಲ ಗ್ರಂಥಗಳೂ ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ಇರುತ್ತವೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಅವುಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಮಾತನಾಡಿ, ಇಂತಹ ಮಹತ್ವದ ಗ್ರಂಥಗಳನ್ನು ನಮ್ಮ ಕಾಲೇಜಿಗೆ ದಾನ ನೀಡಿದ ಕುಲಕರ್ಣಿಯವರನ್ನು ನಾನು ಅಭಿನಂದಿಸುತ್ತೇನೆ. ಇವುಗಳನ್ನು ನಾನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದು, ಅನೇಕ ಉಪಯುಕ್ತ ಗ್ರಂಥಗಳು ಇದರಲ್ಲಿವೆ. ಇವುಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ಗ್ರಂಥ ದಾನಿ ಕುಲಕರ್ಣಿ ಮಾತನಾಡಿ, ಈ ಗ್ರಂಥಗಳಲ್ಲಿ ನನ್ನ ವೈಯಕ್ತಿಕ ಗ್ರಂಥಗಳೂ ಸೇರಿದಂತೆ ವಿಭೂತಿ ಮಾಸಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿಯವರು ನೀಡಿದ ಗ್ರಂಥಗಳು ಇದರಲ್ಲಿವೆ. ಇವೆಲ್ಲವೂ ಅತ್ಯಂತ ಮೌಲಿಕ ಕೃತಿಗಳಾಗಿದ್ದು, ಅವುಗಳನ್ನೆಲ್ಲ ಓದಿ ನೀವು ನಿಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಸಿ.ಐ. ಮರಡಿಮಠ, ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಿಗಿ, ಕಾಲೇಜಿನ ಸಿಬ್ಬಂದಿಯವರು ಉಪಸ್ಥಿತರಿದ್ದರು.