ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಾನಸಿಕ ಹಾಗೂ ದೈಹಿಕ ಸದೃಢತೆ ಅವಶ್ಯಕ. ಆಟ-ಪಾಟಗಳೊಂದಿಗೆ ನಿರಂತರ ಓದು-ಬರಹ ವಿದ್ಯಾರ್ಥಿಗಳಲ್ಲಿ ಆಸಕ್ತಿದಾಯಕ ಕಲಿಕೆಯನ್ನುಂಟು ಮಾಡುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ದತ್ತು ಪಡೆದ ಗದಗ ಶಹರದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 1ರಲ್ಲಿ ಕ್ಲಬ್ ವತಿಯಿಂದ ಕೊಡಮಾಡಿದ ಕುರ್ಚಿ-ಟೇಬಲ್, ನೀರಿನ ಬಾಟಲ್, ಗ್ರಂಥಾಲಯದ ಪುಸ್ತಕಗಳು, ರ್ಯಾಕ್, ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಅಂತಾರಾಷ್ಟ್ರೀಯ ಸಂಸ್ಥೆಯಾದ ಇನ್ನರ್ವ್ಹಿಲ್ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗೆ ಬೇಕಾದ ಸಾಮಗ್ರಿಗಳನ್ನು ಹಾಗೂ ಶಾಲೆಯ ಭೌತಿಕ ಅವಶ್ಯಕತೆಗಳನ್ನು ಪೂರೈಸಿ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ನಮ್ಮ ಶಿಕ್ಷಣ ಇಲಾಖೆ ಇವರಿಗೆ ಅಭಾರಿಯಾಗಿದೆ ಎಂದರು.
ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಮಾತನಾಡಿ, ಗದಗ ಶಹರದ 4 ಹಾಗೂ ಗ್ರಾಮೀಣ ಭಾಗದ 1 ಶಾಲೆಯನ್ನು ಈ ವರ್ಷಕ್ಕೆ ದತ್ತು ಪಡೆಯಲಾಗಿದ್ದು, ಶಾಲೆಯ ಕಲಿಕಾ ಚಟುವಟಿಕೆಗಳಿಗೆ ಪೂರಕವಾಗಿ ಶ್ರಮಿಸಲಾಗುತ್ತಿದೆ ಎಂದರು.
ಕ್ಲಬ್ನನ ಸಿಎಲ್ಸಿಸಿ ಸುಮಾ ಪಾಟೀಲ ಮಾತನಾಡಿ, ಅತ್ಯಂತ ಹಳೆಯದಾದ ಸರ್ಕಾರಿ ಮಾದರಿ ನಂ1 ಶಾಲೆಯನ್ನು ನಾವು ದತ್ತು ಪಡೆಯಲು ನಮಗೆ ಹೆಮ್ಮೆಯೆನಿಸಿದೆ. ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಇಂದು ದೇಶದ ಎಲ್ಲಾ ಕಡೆ ಇದ್ದು, ಶತಮಾನೋತ್ಸವ ಸಂಭ್ರಮಾಚರಣೆ ಜರುಗಲಿ ಎಂದರು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಕ್ಲಬ್ನ ಅನ್ನಪೂರ್ಣ ವರವಿ, ಶಾಂತಾ ನಿಂಬಣ್ಣವರ, ಮೀನಾಕ್ಷಿ ಕೊರವನವರ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕ್ಲಬ್ನ ಪಿಡಿಸಿ ಪ್ರೇಮಾ ಗುಳಗೌಡ್ರ, ಕಾರ್ಯದರ್ಶಿ ವೀಣಾ ತಿರ್ಲಾಪೂರ, ಐಎಸ್ಓ ಪುಷ್ಪಾ ಬಂಡಾರಿ, ಮೀನಾಕ್ಷಿ ಕೊರವನವರ, ಶಾಲೆಯ ಮುಖ್ಯೋಪಾಧ್ಯಾಯೆ ವಿಜಯಾ ಜಕರಡ್ಡಿ, ಸಹಶಿಕ್ಷಕರಾದ ಪವಿತ್ರಾ ಹಿರೇಮಠ, ವಿಜಯಲಕ್ಷ್ಮೀ ಕುಂಟೋಜಿ, ಪ್ರಿಯಾ ಪವಾರ ಉಪಸ್ಥಿತರಿದ್ದರು.