ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿನಿಯರು ಸಮಾಜದಲ್ಲಿ ಧೈರ್ಯದಿಂದ ಬದುಕಬೇಕು. ಪೊಲೀಸ್ ಠಾಣೆಗೆ ಬರಲು ಯಾವುದೇ ಭಯ ಬೇಡ. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಕೂಡಲೇ 112ಗೆ ಕರೆ ಮಾಡಬೇಕು. ಇಲ್ಲದಿದ್ದರೆ ಹತ್ತಿರದಲ್ಲಿರುವ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಬೇಕು ಎಂದು ಪಿ.ಎಸ್.ಐ ಆರ್.ಆರ್. ಮುಂಡವಾಡಗಿ ಹೇಳಿದರು.
ನಗರದ ಶಹರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ `ತೆರೆದ ಮನೆ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಸ್ ನಿಲ್ದಾಣಗಳಲ್ಲಿ ಪ್ರತಿದಿನ ಏನಾದರೊಂದು ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ. ಹೆಚ್ಚು ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಘಟನೆ ಕಂಡಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಬೇಕು. ಮನೆ ಬಿಟ್ಟು ಸಂಬಂಧಿಕರ ಊರಿಗೆ ತೆರಳುವ ಮುನ್ನ ಠಾಣೆಗೆ ಮಾಹಿತಿ ನೀಡಿ ಹೋಗುವ ಅವಶ್ಯಕತೆ ಇದ್ದು, ಇದರಿಂದ ಕಳ್ಳತನ ಪ್ರಕರಣ ತಪ್ಪಿಸಲು ಸಹಾಯವಾಗುತ್ತದೆ ಎಂದರು.
ವಾಟ್ಸ್ಆಪ್ನಲ್ಲಿ ಸ್ಟೇಟಸ್ ಇಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ದೂರದ ಊರಿಗೆ ಸಂಚರಿಸುವಾಗ ಸ್ಟೇಟಸ್ನಲ್ಲಿ ಮಾಹಿತಿಯನ್ನು ಹಾಕಬಾರದು. ಇದರಿಂದ ಕಳ್ಳತನ ಮಾಡಲು ಅನುಕೂಲ ಆಗುತ್ತೆ. ಹಾಗೂ ವಾಟ್ಸ್ಆಪ್ ಡಿಪಿಗೆ ಫೋಟೊ ಹಾಕಬಾರದು. ಅದೇ ಫೋಟೊ ಬಳಸಿಕೊಂಡು ಎಡಿಟ್ ಮಾಡಿ ಬ್ಲಾಕ್ಮೇಲ್ ಮಾಡುವಂತಹ ಸಾಧ್ಯತೆ ಇರುತ್ತದೆ ಎಂದು ಕಿವಿಮಾತು ಹೇಳಿದರು.
ನಿಮ್ಮ ಮೊಬೈಲ್ಗೆ ಅನುಮಾನಾಸ್ಪದ ಕರೆಗಳು ಬರಬಹುದು. ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಬಹುದು. ಅಂತಹ ಕರೆಗಳನ್ನು ಸ್ವೀಕರಿಸಬೇಡಿ. ಬ್ಯಾಂಕ್ನಿಂದ ಹಣ ಪಡೆದು ಮರಳುವಾಗ ಕಳ್ಳರ ಬಗ್ಗೆ ಗಮನವಿರಬೇಕು. ವಯಸ್ಸಾದ ಕೆಲವರಿಗೆ ಹಾಗೂ ಅನಕ್ಷರಸ್ಥರಿಗೆ ಬ್ಯಾಂಕ್ನಲ್ಲಿ ವ್ಯವಹರಿಸುವ ಜ್ಞಾನ ಇರುವುದಿಲ್ಲ. ಅಂತಹ ಸಮಯದಲ್ಲಿ ಅವರ ಸಹಾಯಕ್ಕೆ ನಿವು ಧಾವಿಸಬೇಕು ಎಂದು ಆರ್.ಆರ್. ಮುಂಡವಾಡಗಿ ಹೇಳಿದರು.