ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಷ್ಯ ಜೀವನ ಅತ್ಯಮೂಲ್ಯವಾಗಿದ್ದು, ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ಜೀವನವೇ ಹಾಳಾಗುತ್ತದೆ. ಇದು ಕೇವಲ ವ್ಯಕ್ತಿ, ಕುಟುಂಬ, ಸಮಾಜಕ್ಕಷ್ಟೇ ಅಲ್ಲದೇ ಇಡೀ ಮನುಕುಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಯಾರೊಬ್ಬರೂ ಮಾದಕ ವಸ್ತುಗಳ ಮೋಹಕ್ಕೆ ಸಿಲುಕಬಾರದು ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ಮಂಗಳವಾರ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ನಿಮಿತ್ತ ಬೈಕ್ ರ್ಯಾಲಿ, ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಮಾಜ ಮಾದವ ವಸ್ತುಗಳಿಂದ ಮುಕ್ತವಾಗಿರಬೇಕು. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ 1987 ಡಿಸೆಂಬರ್ 7ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 26ನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನ ಆಚರಿಸಲಾಗುತ್ತದೆ ಎಂದರು.
ಪೊಲೀಸ್ ಠಾಣೆಯಿಂದ ಪ್ರಾರಂಭವಾದ ಬೈಕ್ ರ್ಯಾಲಿ ಪಟ್ಟಣದ ಮುಖ್ಯ ಬಜಾರ್ ರಸ್ತೆ ಮೂಲಕ ಸಾಗಿ ಪಂಪ ವೃತ್ತ, ಕೋರ್ಟ್ ಸರ್ಕಲ್, ಆಸಾರ ಓಣಿ, ವಿದ್ಯಾರಣ್ಯ ಸರ್ಕಲ್, ಶಿಗ್ಲಿ ನಾಕಾ, ಗದಗ ನಾಕಾ, ಬಸ್ ನಿಲ್ದಾಣ ಇತ್ಯಾದಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.ರ್ಯಾಲಿಯಲ್ಲಿ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಪಿಎಸ್ಐ ನಾಗರಾಜ ಗಡಾದ, ಕ್ರೈಂ ಪಿಎಸ್ಐ ಟಿ.ಕೆ. ರಾಠೋಡ, ಎಸ್.ಎಸ್. ಮಕಾಂದಾರ, ಎ.ಎನ್. ಮೌಲ್ವಿ, ವೈ.ಸಿ. ದೊಡ್ಡಮನಿ ಮುಂತಾದವರಿದ್ದರು.
ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿ, ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಕಾನೂನ ಬಾಹಿರ ಎಂದು ಗೊತ್ತಿದ್ದರೂ ಮಾದಕ ವಸ್ತುಗಳ ದುಶ್ಚಟಗಳಿಗೆ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಯುವಕರು ಕುಡಿತ, ಗುಟ್ಕಾ, ಗಾಂಜಾ, ಅಫೀಮು ಇತ್ಯಾದಿಗಳಿಂದ ದೂರವಿರಬೇಕು. ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ, ಸಮಯ ಹಾಳು ಮಾಡಿಕೊಳ್ಳದಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾನೂನಿನ ಹೊರತಾಗಿಯೂ ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದರು.