ಹಾವು.. ಹೆಸರು ಕೇಳ್ತಿದ್ದಂತೆ ಅನೇಕರು ಬೆಚ್ಚಿ ಬೀಳ್ತಾರೆ. ಸಾಧಾರಣವಾಗಿ ಮಾತು ಬರದ ಪುಟ್ಟ ಮಕ್ಕಳು ಬಿಟ್ಟರೆ ಹಾವಿಗೆ ಹೆದರದೆ ಇರುವ ಯಾವ ಜೀವಿಯೂ ಪ್ರಪಂಚದಲ್ಲಿ ಇಲ್ಲ ಎನಿಸುತ್ತದೆ.
ಭಾರತದಲ್ಲಿ ನಾನಾ ಬಗೆಯ ಹಾವುಗಳಿವೆ. ಹಾವು ಕಡಿತದಿಂದ ಹೆಚ್ಚು ಜನರು ಸಾಯುವ ವಿಶ್ವದ ಏಕೈಕ ದೇಶ ಭಾರತ ಅಂದ್ರೆ ನೀವು ನಂಬ್ಲೇಬೇಕು. ವಿಶ್ವಾದ್ಯಂತ ಪ್ರತಿ ವರ್ಷ ಹಾವು ಕಡಿತದಿಂದ ಸಾವನ್ನಪ್ಪುವ ಜನರಲ್ಲಿ ಅರ್ಧದಷ್ಟು ಸಾವು ಭಾರತ ದಲ್ಲಾಗುತ್ತದೆ.
ಹಾವು ವಿಷಕಾರಿ ಪ್ರಾಣಿಯಾಗಿದ್ದು ಅದರ ಕಡಿತವು ಮನುಷ್ಯನ ಸಾವಿಗೆ ಕಾರಣವಾಗಬಹುದು. ಬೇಸಿಗೆಯಲ್ಲಿ ಅನೇಕ ಪ್ರದೇಶಗಳಲ್ಲಿ ವಿಶೇಷವಾಗಿ ಕಾಡುಗಳ ಸಮೀಪವಿರುವ ಮನೆಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತವೆ.
ಭಾರತದಲ್ಲಿ ಸುಮಾರು 300 ಜಾತಿಯ ಹಾವುಗಳು ವಾಸಿಸುತ್ತವೆ. ಇವುಗಳಲ್ಲಿ 60 ಜಾತಿಯ ಹಾವುಗಳು ವಿಷಪೂರಿತವಾಗಿವೆ. ವಿಷಪೂರಿತ ಹಾವು ಕಚ್ಚಿದಾಗ ನೋವು, ಊತ, ಸೆಳೆತ, ವಾಕರಿಕೆ, ವಾಂತಿ, ನಡುಕ ಮತ್ತು ಅಲರ್ಜಿ ಅನುಭವವಾಗುತ್ತದೆ.
ಹಾವು ಕಚ್ಚಿದ ಜಾಗದ ಚರ್ಮದ ಬಣ್ಣ ಬದಲಾಗುತ್ತದೆ. ಅತಿಸಾರ, ಜ್ವರ, ಹೊಟ್ಟೆ ನೋವು, ತಲೆನೋವು, ಸ್ನಾಯು ದೌರ್ಬಲ್ಯ, ಬಾಯಾರಿಕೆ, ಕಡಿಮೆ ರಕ್ತದೊತ್ತಡ, ಅತಿಯಾದ ಬೆವರುವಿಕೆ ಸಂಭವಿಸುತ್ತದೆ.
ಹಾವು ಕಡಿತಕ್ಕೊಳಗಾದ ಸಂದರ್ಭದಲ್ಲಿ ತಕ್ಷಣವೇ ಆ ವ್ಯಕ್ತಿಗೆ ಸ್ವಲ್ಪ ತುಪ್ಪವನ್ನು ನೀಡಿ ವಾಂತಿ ಮಾಡಿಸಬೇಕು. ಇದಾದ ನಂತರ ಅವನಿಗೆ 10-15 ಬಾರಿ ಉಗುರು ಬೆಚ್ಚಗಿನ ನೀರನ್ನು ಕುಡಿಸಿ ವಾಂತಿ ಮಾಡಿಸಿ. ಹೀಗೆ ಮಾಡುವುದರಿಂದ ಹಾವಿನ ವಿಷದ ಪರಿಣಾಮ ಕಡಿಮೆಯಾಗುತ್ತದೆ.
ಬಳಿಕ ತಡಮಾಡದೆ ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಇನ್ನೊಂದು ಏನಪ್ಪಾ ಅಂದ್ರೆ ಹಾವು ಕಚ್ಚಿದ ಜಾಗವನ್ನು ಬರಿಗೈಯಲ್ಲಿ ಮುಟ್ಟಬಾರದು.