ಇತ್ತೀಚಿನ ದಿನಗಳಲ್ಲಿ ವಾಸ್ತು ಎಂದು ನಂಬಿ ಅನೇಕ ಜ್ಯೋತಿಷಿಗಳ ಬಳಿ ಹೋಗಿ ದುಡ್ಡನ್ನು, ನೆಮ್ಮದಿಯನ್ನು ಕಳೆದುಕೊಳ್ಳುವ ಅಮಾಯಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಲವರು ಹಣವನ್ನೂ ಕಳೆದುಕೊಂಡು ಪರಿಹಾರ ಪಡೆಯದೇ ಇನ್ನಷ್ಟು ತೊಂದರೆಗೆ ಒಳಪಟ್ಟು ಹಲುಬುತ್ತಿರುತ್ತಾರೆ. ಅಂತವರಿಗೆಂದೇ ಇಲ್ಲಿವೆ ಕೆಲವು ಸರಳ ಪರಿಹಾರಗಳು.
ವಾಸ್ತು ಎಂದರೆ ಮೂಢ ನಂಬಿಕೆ, ಕೆಲ ತಜ್ಞರ ಧನ ಸಂಗ್ರಹಣಾ ಶಾಸ್ತ್ರ. ಮನೆ ಮುರಿದು, ಮನಸ್ಸು ಮುರಿದು ಕೊನೆಗೆ ಸಮಾಧಾನ ಸಿಗದೇ ಯಾಕಪ್ಪಾ ವಾಸ್ತುವಿಗೆ ಮೊರೆ ಹೋದೆವು ಎನ್ನುವ ಹಾಗೆ ಮಾಡುವವರು ಈಗ ಎಲ್ಲೆಡೆ ತುಂಬಿದ್ದಾರೆ. ಕೆಲವು ವಾಸ್ತು ತಜ್ಞರು ಮನೆಗೆ ಬರುತ್ತಾರೆ, ಪಾಸಿಟಿವ್-ನೆಗಟಿವ್ ಎನರ್ಜಿ ಪರೀಕ್ಷೆ ಮಾಡುತ್ತಾರೆ. ಕೆಲ ಗೋಡೆಗಳನ್ನೋ, ಮೂಲೆಗಳನ್ನೋ ಒಡೆಸುತ್ತಾರೆ ಹಾಗೂ ಕೆಲವು ಬದಲಾವಣೆಗಳನ್ನು ಸೂಚಿಸುತ್ತಾರೆ. ಮೊದಲೇ ಆರ್ಥಿಕ ತೊಂದರೆ ಎಂದು ಹೋದರೆ ಮತ್ತಿಷ್ಟು ಸಂಕಷ್ಟ ತಂದಿಟ್ಟು ಆ ವಾಸ್ತು ಈ ವಾಸ್ತು ಎಂದು ಸುಸ್ತು ಮಾಡಿಸುತ್ತಾರೆ ಎಂಬುದು ಹಲವರ ಅಂಬೋಣ.
ಎಲ್ಲಾ ಕಡೆಗೆ ಹೋದೆವು, ವಾಸ್ತು ಆಯಿತು, ಅದಾಯಿತು, ಇದಾಯಿತು, ಆ ಪೂಜೆ ಆಯಿತು, ಈ ಪೂಜೆ ಆಯಿತು…ಇನ್ನೂ ಏನೂ ಬದಲಾಗಿಲ್ಲ. ಬರೀ ಹಣ ಹೋಯಿತು, ಚಿಂತೆ ಹೆಚ್ಚಾಯಿತು ಹೀಗೆನಿಸಿದಾಗ ಹೆಚ್ಚು ಮರುಗದಿರಿ. ವೈಜ್ಞಾನಿಕ ವಾಸ್ತುವಿನ ಕೆಲವು ಸರಳ ವಿಧಾನಗಳ ನಿಮ್ಮ ಬದುಕನ್ನೇ ಬದಲಾಯಿಸುತ್ತವೆ.
ವೈಜ್ಞಾನಿಕ ವಾಸ್ತು ಒಳ್ಳೆಯ ಆಯ್ಕೆ. ಇದರಲ್ಲಿ ಮನೆ ಒಡೆಯುವ ಅವಶ್ಯಕತೆಯಿಲ್ಲ ಹಾಗೂ ಎಂತಹ ವಾಸ್ತು ದೋಷಗಳಿದ್ದರೂ ಅತಿ ಸರಳ ಪರಿಹಾರಗಳಿವೆ. ದಕ್ಷಿಣಕ್ಕೆ ಅಂಗಡಿ, ಹೋಟೆಲ್, ಫ್ಯಾಕ್ಟರಿ ಬಾಗಿಲು ಇದೆಯೇ, ಒಂದು ತಾಮ್ರದ ಪಟ್ಟಿ ಅದರ ಜೊತೆಗೆ ಕೇಸರಿ ಬಣ್ಣ ಹಚ್ಚಿಬಿಡಿ, ದೋಷ ಪರಿಹಾರ ಆಯ್ತು. ಹೇಗೆ ಅಂತೀರಾ? ಅದು ಋಣಾತ್ಮಕ ಎಂದೇ ಹಲವರ ಭಾವನೆ. ಇರಲಿ ಋಣಾತ್ಮಕ ಎಂದೇ ಹೇಳೋಣ. ಶುದ್ಧ ತಾಮ್ರ ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದು ಮೆಟಲ್ ವಾಸ್ತು ಥೆರಪಿ. ಮತ್ತೆ ಕೇಸರಿ ಬಣ್ಣ ಕೆಟ್ಟ ಶಕ್ತಿಯನ್ನು ಹೊಡೆದು ಓಡಿಸುತ್ತದೆ. ಇದು ಕಲರ್ ಥೆರಪಿ.
ಇಲ್ಲಿ ಈ ಎರಡು ಥೆರಪಿಗಳ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತವೆ ಎಂದರೆ, ನೀವು ಊಹಿಸಲೂ ಸಾಧ್ಯವಿಲ್ಲ. ನಾನು ನೂರಕ್ಕೂ ಹೆಚ್ಚು ಜನರಿಗೆ ಈ ಸರಳ ಟಿಪ್ಸ್ ಹೇಳಿದ್ದೇನೆ. ಇನ್ನು ದಕ್ಷಿಣ ಬಾಗಿಲ ಹೋಟೆಲ್ ಇದೆ, ಲಾಭ ಆಗುತ್ತಿಲ್ಲ ಅಂದರೆ ಪ್ರವೇಶ ದ್ವಾರದ ಅಭಿಮುಖವಾಗಿರುವ ಗೋಡೆಗೆ ಒಂದು ದೀಪ ಹಚ್ಚಿ ಇಟ್ಟುಬಿಡಿ, ಇದು ಫೈರ್ ಥೆರಪಿ.
ನಿಮ್ಮದು ಹೋಟೆಲ್ ಇದ್ದರೆ ಕ್ಯಾಶ್ ಕೌಂಟರ್ ಉತ್ತರಕ್ಕೆ ಇರಬೇಕು, ಮಾಲೀಕರು ಉತ್ತರಾಭಿಮುಖವಾಗಿ ಕೂರಬೇಕು. ಇರದಿದ್ದರೆ ಕೌಂಟರಿನಲ್ಲಿ ಕೇಸರಿ ಬಣ್ಣದ ಪಟ್ಟಿ ಇಟ್ಟು ಮುಂದೆ ಒಂದು ತಾಮ್ರದ ವಸ್ತು ಇಟ್ಟರೆ ದೋಷ ಪರಿಹಾರ. ಪ್ರವೇಶ ದ್ವಾರ ರಸ್ತೆಗೆ ಸಮನಾಗಿರಬೇಕು. ಸಮನಾಗಿರದಿದ್ದರೆ ತಾಮ್ರದ ಒಂದು ಪಟ್ಟಿಯನ್ನು ಬಾಗಿಲಿಗೆ ಬಡಿಸಿ ಅಥವಾ ಒಂದು ತಾಮ್ರದ ಪಿರಾಮಿಡ್ ಪ್ರವೇಶ ದ್ವಾರದ ಕಡೆಗೆ ಇಟ್ಟರೆ ಸಾಕು.
ಮನೆಯಲ್ಲಿ ನೈರುತ್ಯದಲ್ಲಿ ಎತ್ತರವಿರಬೇಕು, ಇಲ್ಲೇನಾದರೂ ತಗ್ಗಿದ್ದರೆ ಧನ ಹಾಗೂ ಆರೋಗ್ಯದ ಸಮಸ್ಯೆ ಖಂಡಿತ. ಬಹಳ ಜನರಿಗೆ ಇದರ ಅರಿವಿಲ್ಲದೆ ದೊಡ್ಡ ದೊಡ್ಡ ಪಂಡಿತರ ಬಳಿಗೆ ಹೋಗಿ ಹಣ ಕಳೆದುಕೊಳ್ಳುತ್ತಾರೆ. ಇಲ್ಲಿ ಸ್ವಲ್ಪ ಮೆಟಾಲಿಕ್ ಕ್ರಿಸ್ಟಲ್ ಬಳಸಿ ಅಥವಾ ಕಲರ್ ಥೆರಪಿ ಬಳಸಬಹುದು. ಏನೂ ತಿಳಿಯದಿದ್ದರೆ ಮೊದಲು ಅಲ್ಲಿ ಉಪ್ಪು ಅಥವಾ ತುಳಸಿ ಗಿಡ ನೆಟ್ಟು ಬೆಳೆಸಿ.
ಇವಿಷ್ಟು ಮಾಡಿ ನೋಡಿ, ನೀವೇ ಊಹಿಸಲಾಗದಷ್ಟು ಪರಿಹಾರ ದೊರೆಯುತ್ತೆ. ನಿಮ್ಮ ಅಕ್ಕಪಕ್ಕದವರಿಗೆ ಈ ಉಪಾಯಗಳನ್ನು ಹೇಳಿ. ಬೇರೆಯವರನ್ನು ನಂಬಿ ಹಣ ಕಳೆದುಕೊಳ್ಳದಿರಿ. ಒಳ್ಳೆಯ ವೈಜ್ಞಾನಿಕ ವಾಸ್ತು ಸಲಹೆ ಪಡೆದುಕೊಳ್ಳಿ. ನಿಮಗೇ ಗೊತ್ತಿದ್ದರೆ ಆ ಉಪಾಯವನ್ನು ಅನುಷ್ಠಾನಗೊಳಿಸಿ.
– ಶಿಲ್ಪಾ ರಘೋತ್ತಮ ಕೊಪ್ಪರ.
ವೈಜ್ಞಾನಿಕ ವಾಸ್ತು ಸಲಹೆಗಾರರು, ಗದಗ.