ಮಾವಿನಹಣ್ಣು ಇಲ್ಲದೇ ಬೇಸಿಗೆಯನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಯನ್ನು ಸವಿಯಲು ಬೇಸಿಗೆ ಸಕಾಲ. ಈ ಸಮಯದಲ್ಲಿ ಹಣ್ಣಿನ ಮಾರುಕಟ್ಟೆಯು ವಿವಿಧ ಮಾವಿನಹಣ್ಣುಗಳ ಸುವಾಸನೆ ಮತ್ತು ರುಚಿಯಿಂದ ತುಂಬಿರುತ್ತದೆ.
ಹೀಗಾಗಿ ಮಾವಿನ ಹಣ್ಣು ಹಲವರಿಗೆ ಫೇವರಿಟ್. ಮಾವಿನ ಹಣ್ಣಿನ ರುಚಿಗೆ ಬೇರೆ ಹಣ್ಣು ಸಾಟಿ ಇಲ್ಲ ಎಂದೇ ಹೇಳಬಹುದು. ಬೇಸಿಗೆಯಲ್ಲಿ ರಸ್ತೆ-ರಸ್ತೆಗಳಲ್ಲಿ ಬೀದಿಬದಿಗಳಲ್ಲಿ ರಾಶಿ-ರಾಶಿ ಗುಡ್ಡೆ ಹಾಕಿಕೊಂಡು ಈ ಹಣ್ಣನ್ನು ಮಾರಾಟ ಮಾಡಲಾಗುತ್ತದೆ. ಹೀಗಾಗಿ ಮಾವಿನ ಹಣ್ಣಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಮಾವಿನಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳಾದ ಮೆಗ್ನಿಶಿಯಂ, ಪೊಟ್ಯಾಶಿಯಂ, ಪ್ರೊಟೀನ್, ಫೋಲೆಟ್, ವಿಟಮಿನ್ ಎ ಸಾಕಷ್ಟು ಪ್ರಮಾಣದಲ್ಲಿರುತ್ತದೆ.
ಇನ್ನೂ ಮಾವಿನ ಹಣ್ಣು ತಿಂದ ಬಳಿಕ ನೀವು ಅಪ್ಪಿ-ತಪ್ಪಿಯೂ ಕೆಲವು ವಸ್ತುಗಳನ್ನು ತಿನ್ನಬಾರದು. ಅದರಲ್ಲಿ ವಿಶೇಷವಾಗಿ ಮೊಸರು. ಮಾವಿನ ಹಣ್ಣುಗಳ ತಿಂದ ಬಳಿಕ ಮೊಸರು ತಿನ್ನೋದ್ರಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳಲಿದೆ. ಮಾತ್ರವಲ್ಲ, ತಲೆನೋವಿನಂತಹ ಸಮಸ್ಯೆಯೂ ಕಾಣಿಸಿಕೊಳ್ಳಲಿದೆ. ಮಾವಿನ ಹಣ್ಣು ತಿಂದ ಬಳಿಕ ಏನೆಲ್ಲ ಸಮಸ್ಯೆ ಆಗಬಹುದು ಅನ್ನೋ ವಿವರ ಇಲ್ಲಿದೆ.
ಏನೆಲ್ಲ ಸಮಸ್ಯೆ ಆಗುತ್ತದೆ..?
ಗ್ಯಾಸ್ಸ್ಟ್ರಿಕ್
ತಲೆನೋವು
ಕರುಳಿನ ಆರೋಗ್ಯದಲ್ಲಿ ಸಮಸ್ಯೆಗಳು
ಅಜೀರ್ಣ ಸಮಸ್ಯೆ
ವಾಕರಿಕೆ
ವಾಂತಿ ಕೂಡ ಆಗಬಹುದು
ಅತಿಸಾರ
ಹುಳಿ ಇರುವ ವಸ್ತುಗಳು ಬೇಡ:-
ಮೊಸರು ಮಾತ್ರವಲ್ಲ. ನಿಂಬೆ, ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಹಣ್ಣುಗಳು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುತ್ತವೆ. ಇವುಗಳನ್ನು ಮಾವಿನ ಹಣ್ಣಿನೊಂದಿಗೆ ಬೆರೆಸಿದಾಗ ದೇಹದಲ್ಲಿನ pH ಸಮತೋಲಕ್ಕೆ ಅಡ್ಡಿ ಆಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಅಸಮತೋಲನ ಉಂಟುಮಾಡುತ್ತದೆ. ಹೀಗಾಗಿ ಮಾವಿನಹಣ್ಣಿನ ಜೊತೆಗೆ ಈ ಹಣ್ಣುಗಳನ್ನು ತಿನ್ನೋದನ್ನ ಸಂಪೂರ್ಣವಾಗಿ ನಿಲ್ಲಿಸಬೇಕು.
ಮಸಾಲೆಯುಕ್ತ ಪದಾರ್ಥ ಬೇಡ:-
ಮಾವಿನಹಣ್ಣು ತಿಂದ ತಕ್ಷಣ ಮಸಾಲೆಯುಕ್ತ ಭಕ್ಷ್ಯಗಳನ್ನು ತಿನ್ನೋದ್ರಿಂದ ಎದೆಯುರಿ, ಆಮ್ಲೀಯತೆ ಸೇರಿದಂತೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮಾವಿನಹಣ್ಣು ತಿಂದ ನಂತರ ದೇಹವು ತಣ್ಣಗಾಗಬೇಕು. ಆದರೆ ಮಸಾಲೆಯುಕ್ತ ಪದಾರ್ಥಗಳು ಶಾಖವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಸಾಲೆಯುಕ್ತ ಪದಾರ್ಥ ಸೇವನೆ ತ್ಯಜಿಸೋದು ಸೂಕ್ತ.
ಕಹಿ ಪದಾರ್ಥ ಕೂಡ ಬೇಡ:-
ಅದೇ ರೀತಿ ಮಾವಿನ ಹಣ್ಣು ತಿಂದಾಗ ಹಾಗಲಕಾಯಿಯನ್ನೂ ತಿನ್ನಬಾರದು. ಹಾಗಲಕಾಯಿಯಲ್ಲಿರುವ ಕೆಲವು ಕಹಿ ಪದಾರ್ಥಗಳು ಮಾವಿನಲ್ಲಿರುವ ಸಿಹಿ ಆಮ್ಲಗಳನ್ನು ಸಮತೋಲನಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಮಸ್ಯೆ ಆಗಲಿದೆ.
ಕೂಲ್ ಡ್ರಿಂಕ್ಸ್ ಬೇಡವೇ ಬೇಡ:-
ಮಾವಿನ ಹಣ್ಣು ತಿಂದ ತಕ್ಷಣ ಅನೇಕರು ಕೂಲ್ ಡ್ರಿಂಕ್ಸ್ ಕುಡಿಯುತ್ತಾರೆ. ಇದು ದೇಹದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಹೊಟ್ಟೆ ತಕ್ಷಣ ತಣ್ಣಗಾಗುವುದರಿಂದ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ.
ನೀರನ್ನೂ ಕುಡಿಯದಿರಿ:-
ಮಾವಿನಹಣ್ಣುಗಳು ನೈಸರ್ಗಿಕವಾಗಿ ಹೆಚ್ಚಿನ ನೀರಿನ ಅಂಶ ಹೊಂದಿರುತ್ತವೆ. ತಿಂದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತದೆ. ಕನಿಷ್ಠ ಅರ್ಧ ಗಂಟೆ ನೀರು ಕುಡಿಯದೇ ಇದ್ದರೆ ಒಳ್ಳೆಯದು.