ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಭಾರತೀಯ ಸಂವಿಧಾನದ ಅನುಚ್ಛೇದ 21ರಲ್ಲಿ ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಬೇಕೆಂದು ಹೇಳಿದೆ. ವಿಶೇಷ ಚೇತನರು ಸಾಮಾನ್ಯರಿಗಿಂತ ಕಡಿಮೆ ಇಲ್ಲ. ಅವರಿಗೆ ವಿಶೇಷವಾದ ಬುದ್ಧಿಶಕ್ತಿ ಇದ್ದು, ಅವರ ಆಸಕ್ತಿಗೆ ತಕ್ಕಂತೆ ಅವರಿಗೆ ಶಿಕ್ಷಣ ನೀಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಹೇಳಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸ್ಪಂದನಾ ಕಿವುಡ ಮತ್ತು ಮೂಗರ ವಸತಿ ಶಾಲೆ ಗದಗ ಇವರ ಸಂಯುಕ್ತಾಶ್ರಯದಲ್ಲಿ ಸ್ಪಂದನಾ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆರ್ಪಿಡಬ್ಲೂ ಕಾಯ್ದೆ 2016ರ ಅಡಿಯಲ್ಲಿ 21 ವಿಕಲಾಂಗ ಪಟ್ಟಿ ಬಿಡುಗಡೆಗೊಳಿಸಿದೆ. ಇಂತಹ ವಿಕಲಾಂಗರು ವಿಕಲಚೇತನ ಗುರುತಿನ ಚೀಟಿ ಪಡೆದು ಸರ್ಕಾರದ ಸೌಲಭ್ಯ ಪಡೆಯಲು ಅವರಿಗೆ ಅರಿವು ಮೂಡಿಸಬೇಕು. ಇಂತಹ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಕರ ಸೇವೆ ಅಭಿನಂದನೀಯವಾಗಿದೆ. ಸಾಮಾನ್ಯರಂತೆ ಇವರೂ ಸಹ ಗೌರವಯುತವಾಗಿ ಬದುಕಲು ಸಮಾಜದಲ್ಲಿನ ಪ್ರತಿಯೊಬ್ಬರೂ ಕೈಜೋಡಿಸಿ ವಿಕಲಚೇತನರಿಗೆ ಅವಕಾಶ ನೀಡಿ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟೇಶ್ವರ ಗ್ರಾಮಾಂತರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ. ಎಸ್.ಎಫ್. ದ್ಯಾವನಗೌಡರ ಅವರು ಶಿಕ್ಷಣ ಸಂಸ್ಥೆ ನಡೆದುಬಂದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


