ಚಿತ್ರದುರ್ಗ:- ಕೋಟೆನಾಡು ಚಿತ್ರದುರ್ಗದಲ್ಲಿ ಸಿನಿಮಾವನ್ನೇ ಮೀರಿಸುವಂತಹ ಘಟನೆ ಒಂದು ಜರುಗಿದೆ. ವರದಕ್ಷಿಣೆ ದುರಾಸೆಗೆ ಮೊದಲ ಮದುವೆ ವಿಚಾರ ಮುಚ್ಚಿಟ್ಟು ಎರಡನೇ ಮದುವೆ ಆಗಲು ಹಸೆಮಣೆ ಏರಿದ್ದ ಗಂಡನಿಗೆ ಮಂಟಪದಲ್ಲೇ ಹೆಂಡ್ತಿ ಚಪ್ಪಲಿಯಿಂದ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಎಸ್, ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವರದಕ್ಷಿಣೆ ದುರಾಸೆಗೆ ಎರಡನೇ ಮದುವೆಗೆ ಹಸೆಮಣೆ ಏರಲು ಸಿದ್ಧವಾಗಿದ್ದ ಕಾರ್ತಿಕ್ ಎಂಬಾತನಿಗೆ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ತಕ್ಕ ಶಾಸ್ತಿ ಮಾಡಿದ್ದಾರೆ. ಕಲ್ಯಾಣ ಮಂಟಪದಲ್ಲೇ ಎಲ್ಲರ ಮುಂದೆ ಸರಿಯಾಗಿ ಗೂಸಾ ಕೊಟ್ಟಿದ್ದಾರೆ.
4 ವರ್ಷದ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ತನುಜಾ ಎಂಬಾಕೆಯನ್ನ ಆರೋಪಿ ಕಾರ್ತಿಕ್ ಮದುವೆಯಾಗಿದ್ದ. ಹೀಗಿದ್ದೂ ಕಾರ್ತಿಕ್ ಯಾರಿಗೂ ಗೊತ್ತಾಗದಂತೆ ಚಿತ್ರದುರ್ಗದಲ್ಲಿ 2ನೇ ಮದುವೆಗೆ ಪ್ಲಾನ್ ಮಾಡಿದ್ದ. ಮಾಹಿತಿಗಳ ಪ್ರಕಾರ, ವರದಕ್ಷಿಣೆ ಆಸೆಗೆ ಮತ್ತೊಮ್ಮೆ ಹಸಮಣೆ ಏರಲು ಸಿದ್ಧವಾಗಿದ್ದ ಎಂದು ಹೇಳಲಾಗಿದೆ. ಈ ವಿಚಾರ ಹೇಗೋ ಮೊದಲ ಪತ್ನಿಯ ಕಿವಿಗೆ ಬಿದ್ದಿದೆ. ಸುದ್ದಿ ತಿಳಿದು ಕುಟುಂಬಸ್ಥರೊಂದಿಗೆ ಮಂಟಪಕ್ಕೇ ಬಂದು ಧರ್ಮದೇಟು ಕೊಟ್ಟಿದ್ದಾಳೆ. ಆ ಮೂಲಕ ಕಾರ್ತಿಕ್ ಪತ್ನಿ ತನುಜಾ ಕುಟುಂಬಸ್ಥರಿಂದ ಎರಡನೇ ಮದುವೆಗೆ ಬ್ರೇಕ್ ಬಿದ್ದಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯಿಂದ ಕಲ್ಯಾಣದ ವೇಳೆ ಎರಡನೇ ವಧುವಿನ ಕುಟುಂಬಸ್ಥರು ಕಕ್ಕಾಬಿಕ್ಕಿಯಾಗಿದ್ದಾರೆ.