ಹಾಸನ: ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳ ಹಾಗೂ ನಿರಂತರ ಸಂದೇಹ ಸಹಿಸಲಾಗದೇ ಯುವ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹೆಚ್. ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಐ. ಹುಣಸೆಕೆರೆ ಗ್ರಾಮದ ಹೆಚ್. ಎಲ್. ಇಂದ್ರ (24) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಇಂದ್ರ ಅವರ ವಿವಾಹ ಹೆಚ್. ಮೈಲಳ್ಳಿ ಗ್ರಾಮದ ಎಂ. ಹೆಚ್. ಸ್ವಾಮಿ ಅವರೊಂದಿಗೆ ನಡೆದಿತ್ತು.
ವಿವಾಹದ ವೇಳೆ ವರದಕ್ಷಿಣೆಯಾಗಿ 60 ಗ್ರಾಂ ಚಿನ್ನ ಹಾಗೂ 1.30 ಲಕ್ಷ ರೂಪಾಯಿ ನಗದು ಹಣವನ್ನು ಇಂದ್ರ ಪೋಷಕರು ನೀಡಿದ್ದರು ಎನ್ನಲಾಗಿದೆ. ಪತಿ ಸ್ವಾಮಿ ಬೇಕರಿ ನಡೆಸುತ್ತಿದ್ದು, ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಬಳಿಕ ಗ್ರಾಮಕ್ಕೆ ಬಂದು ನೆಲೆಸಿದ್ದರು. ಈ ಹಿನ್ನೆಲೆ ವರದಕ್ಷಿಣೆಗಾಗಿ ಹಣ ತರಬೇಕು ಎಂದು ಇಂದ್ರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದ ಹಾಗೂ ಅವಳ ಮೇಲೆ ಅನಾವಶ್ಯಕ ಸಂದೇಹ ಪಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇನ್ನೂ ವಿವಾಹವಾಗಿ ನಾಲ್ಕು ವರ್ಷಗಳಾದರೂ ದಂಪತಿಗೆ ಮಕ್ಕಳಿರಲಿಲ್ಲ. ಈ ವಿಚಾರವೂ ಮನಸ್ತಾಪಕ್ಕೆ ಕಾರಣವಾಗಿದ್ದು, ಈ ಸಂಬಂಧ ಒಂದೆರಡು ಬಾರಿ ರಾಜಿ ಪಂಚಾಯಿತಿಯೂ ನಡೆದಿತ್ತು. ಆದರೆ ಸಮಸ್ಯೆ ಪರಿಹಾರವಾಗಿರಲಿಲ್ಲ ಎಂದು ಹೇಳಲಾಗಿದೆ.
ನಿನ್ನೆ (ಜ.31) ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಮನಸ್ತಾಪ ತೀವ್ರಗೊಂಡ ಹಿನ್ನೆಲೆ ಇಂದ್ರ ವಿಷ ಸೇವಿಸಿದ್ದಾಳೆ. ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಕುರಿತು ಇಂದ್ರ ಪೋಷಕರು ದುದ್ದ ಪೊಲೀಸ್ ಠಾಣೆಯಲ್ಲಿ ಪತಿ ಸ್ವಾಮಿ, ಅತ್ತೆ ಶಂಕ್ರಮ್ಮ ಹಾಗೂ ಅತ್ತಿಗೆ ಪುಟ್ಟಿ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.



