ಕೋಲಾರ:- ಪತಿ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೇ ಮದುವೆಯಾದ ಒಂದೇ ವರ್ಷಕ್ಕೆ ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಕೋಲಾರದ ಮಾಲೂರು ತಾಲೂಕಿನ ಕಾಡದೇನಹಳ್ಳಿಯಲ್ಲಿ ಜರುಗಿದೆ.
25 ವರ್ಷದ ರಶ್ಮಿ ಮೃತ ದುರ್ದೈವಿ. ಪತಿ ಮನೆಯಲ್ಲೇ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನೇಶ್ ಹಾಗೂ ರಶ್ಮಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಷದ ಹಿಂದೆಯಷ್ಟೇ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದೀಗ ಪತಿ ಮನೆಯವರ ಕಿರುಕುಳ ತಾಳಲಾರದೇ ಸೂಸೈಡ್ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ ಏನಿದೆ!?
ʻರೀ ಸಾರಿ ನಿಮ್ಮ ಅಮ್ಮ, ದೊಡ್ಡಮ್ಮನ ಕಾಟ ತಡೆಯೋಕೆ ಆಗುತ್ತಿಲ್ಲ. ಮದುವೆಯಾಗಿ ಬಂದಾಗಿನಿಂದ ನೆಮ್ಮದಿಯೇ ಇಲ್ಲ. ನನ್ನಿಂದ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ನನ್ನ ಗಂಡ ಒಳ್ಳೆಯವನೇ, ಆದರೆ ಮನೆಯವರು ಒಳ್ಳೆಯವರಲ್ಲ. ಅದಕ್ಕೆ ನೀವು ಬರುವಷ್ಟರಲ್ಲೇ ಸಾಯುತ್ತಿದ್ದೇನೆ, ಬೈʼ ಎಂದು ಬರೆದಿದ್ದಾರೆ.
ಇತ್ತ ತಂದೆ ತಾಯಿಗೂ ಕ್ಷಮೆ ಕೇಳಿರುವ ರಶ್ಮಿ, ಅಮ್ಮ ಇಷ್ಟು ದಿನ ಇಲ್ಲಿನ ಕಷ್ಟ ಸಹಿಸಿಕೊಂಡೆ. ಇಲ್ಲಿಯವರು ಒಳ್ಳೆಯವರಲ್ಲ. ವರದಕ್ಷಿಣೆ ತಂದಿಲ್ಲ ಎಂದು ಹೊಡೆಯುತ್ತಾರೆ ಎಂದು ಬರೆದು ಪತಿ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಇನ್ನೂ 3 ತಿಂಗಳ ಹಿಂದೆ ರಶ್ಮಿಗೆ ಗರ್ಭಪಾತವಾಗಿದ್ದು, ವರದಕ್ಷಿಣೆ ನೀಡಿಲ್ಲ. ಮಗು ಆಗಿಲ್ಲ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.