ವಿಜಯಸಾಕ್ಷಿ ಸುದ್ದಿ, ಗದಗ: ಬಾಬಾಸಾಹೇಬ್ ಎಂದೇ ಜನಪ್ರಿಯರಾಗಿರುವ ಡಾ. ಬಿ.ಆರ್. ಅಂಬೇಡ್ಕರರು ಕೇವಲೊಂದು ಜಾತಿಗೆ ಸೀಮಿತವಾಗದೆ ಇಡೀ ದೇಶದಲ್ಲಿ ಮಾದರಿಯಾಗಿವುದಲ್ಲದೆ ಸರ್ವ ಜನಾಂಗಕ್ಕೂ ನ್ಯಾಯ ಒದಗಿಸಲು ಸಂವಿಧಾನದ ರಚಿಸುವ ಮೂಲಕ ಸರ್ವರಲ್ಲಿ ಸಮಾನತೆ ತೋರಿದ ನಾಯಕರಾಗಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಅಭಿಪ್ರಾಯಪಟ್ಟರು.
ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದ ನಿಮಿತ್ತ ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರರು ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ಸ್ಮರಣೀಯ ವ್ಯಕ್ತಿಯಾಗಿದ್ದು, ಅವರ ಕೊಡುಗೆ ಅಪಾರವಾಗಿದೆ. ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿಯಾಗಿ ಎಲ್ಲ ಜಾತಿಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಎಂದೂ ಹಿಂದುಳಿದ ನಾಯಕ ಎಂದು ನಾನು ನಂಬುವುದಿಲ್ಲ. ಅವರು ಎಂದಿಗೂ ಎಲ್ಲ ಜನಾಂಗದ ನಾಯಕರು. ಸಮಾಜದ ಕಟ್ಟಕಡೆಯ ಶೋಷಿತರಿಂದ ಹಿಡಿದು ಮೇಲ್ವರ್ಗದ ಪ್ರತಿಯೊಬ್ಬರೂ ಇವರು ರಚಿಸಿದ ಸಂವಿಧಾನದಿಂದ ಸಮಾನತೆ ತೋರಿದ್ದಾರೆ ಎಂದು ಪಗಡದ ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ರಾಮಗಿರಿ, ಶುಭಂ, ಮನೋಜ್ ಮೇದಾರ, ವಿನೋದ, ಕೃಷ್ಣಾ, ಶ್ರೀಕಾಂತ, ಆಸಿಫ್, ಸುನಿಲ್ ಸೇರಿದಂತೆ ಹಲವರಿದ್ದರು.