ಧಾರವಾಡ: ಸಚಿವ ಹೆಚ್ಸಿ ಮಹದೇವಪ್ಪ ಅವರು ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಈ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಂಜನಗೂಡು ಉಪಚುನಾವಣೆಯಲ್ಲಿ ನನಗೆ ಸೊಂಟಕ್ಕೆ ಪೆಟ್ಟಾಗಿತ್ತು. ಒಳಗಡೆ ಕೀವಾಗಿ ಕಾಲು ಅಲುಗಾಡಿಸದಂತಾಗಿತ್ತು. ಅಂದಿನಿಂದ ಸಮಸ್ಯೆ ಇದೆ. ಹೀಗಾಗಿ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವುದಾಗಿ ಸಮರ್ಥನೆ ನೀಡಿದ್ದಾರೆ.
ಈ ಬಗ್ಗೆ ವಿವರಿಸಿದ ಅವರು, ಕುಳಿತರೆ ಬೇಗ ಏಳಲು ಆಗೋದಿಲ್ಲ, ಬಗ್ಗಲು ಕೂಡ ಸಾಧ್ಯವಾಗೋದಿಲ್ಲ. ಎಷ್ಟೋ ಜನ ಕಾಲು ಮುಂದಕ್ಕೆ ಇಟ್ಟು ನಮಸ್ಕಾರ ಮಾಡಿಸಿಕೊಳ್ಳೋರಿದ್ದಾರೆ. ಹಾಗೆ ನಾನು ಮಾಡುವವನಲ್ಲ. ನೀವು ಇದನ್ನು ಗಮನಿಸಿದ್ದು ಸಂತಸ ತಂದಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಹೇಳಿದರು.
ಆಪರೇಷನ್ ಕಮಲ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಮಹದೇವಪ್ಪ, ನಮ್ಮ ಅಧ್ಯಕ್ಷರಿಗೆ ಮಾಹಿತಿ ಇರುತ್ತೆ. ಹೀಗಾಗಿ ಅವರು ಹೇಳಿರುತ್ತಾರೆ. ನಾನು ಅಧಿಕಾರಿಗಳ ಸಭೆಯಲ್ಲಿದ್ದೇನೆ. ಹೀಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮಗಿಂತ ಮಾಧ್ಯಮಗಳಿಗೇ ಹೆಚ್ಚು ಮಾಹಿತಿ ಇದೆ ಎಂದರು.