ವಿಜಯಸಾಕ್ಷಿ ಸುದ್ದಿ, ಡಂಬಳ: 300 ವರ್ಷಗಳಿಂದ ಮಹಾತ್ಮರಾದ ಅರ್ಧನಾರೀಶ್ವರರನ್ನು ಸದಾ ಕಾಲ ನೆನಪಿಸುತ್ತೇವೆ ಎಂದರೆ ಮಹಾತ್ಮರಿಗೆ ಸಾವಿಲ್ಲ. ಸಾಧನೆ ಮಾಡಿದವರು ಕಾಲವನ್ನು, ಕರ್ಮವನ್ನು ಗೆದ್ದವರು ಆಗಿರುವುದರಿಂದ ಇಂದಿಗೂ ಜಾತ್ರಾ ಮಹೋತ್ಸವದ ಮೂಲಕ ಅವರನ್ನು ನೆನೆಯುತ್ತಿದ್ದೇವೆ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಡಂಬಳ ಗ್ರಾಮದ ಆರಾಧ್ಯ ದೇವರಾದ ಶ್ರೀ ತೋಂಟದ ಮದರ್ಧನಾರಿಶ್ವರರ 285ನೇ ಜಾತ್ರಾಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಕಷ್ಟ-ಕಾರ್ಪಣ್ಯಗಳು ದೂರವಾಗಬೇಕಾದರೆ ಎಲ್ಲಿಯವರೆಗೆ ಅರ್ಧನಾರೀಶ್ವರರಂತಹ ಮಹಾತ್ಮರನ್ನು ನೆನೆಯುತ್ತೇವೆಯೋ ಅಲ್ಲಿಯವರೆಗೆ ಉತ್ತಮತೆ ಇರಲಿದೆ. ಎಲ್ಲಾ ಮಳೆಹನಿಗಳು ಮುತ್ತು ಆಗುವುದಿಲ್ಲ. ಕೋಟಿಗೊಂದು ಹನಿಗಳಲ್ಲಿ ಮುತ್ತಾಗುತ್ತದೆ. ಹಾಗೆ ಕೋಟಿಗೊಬ್ಬರು ಶ್ರೀ ತೋಂಟದ ಮದರ್ಧನಾರಿಶ್ವರರು ಆಗಿದ್ದಾರೆ ಎಂದು ಹೇಳಿದರು.
ಜಾತ್ರಾ ಮಹೋತ್ಸವದ ನಿಮಿತ್ತ ಡೊಳ್ಳಿನ ಗಾಯನ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್.ಪಾಟೀಲ್, ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಸದಸ್ಯೆ ಯಲ್ಲಮ್ಮ ಬಂಡಿ, ಜಾತ್ರಾ ಸಮಿತಿ ಅಧ್ಯಕ್ಷ ಭೀಮಪ್ಪ ಗದಗ, ಉಪಾಧ್ಯಕ್ಷ ಯಲ್ಲಪ್ಪ ದಂಡಿನ, ವಿರೂಪಾಕ್ಷಪ್ಪ ಲಕ್ಕುಂಡಿ, ಜಿ.ವಿ. ಹಿರೇಮಠ, ವಿ.ಎಸ್. ಯರಾಶಿ, ಚನ್ನಬಸಪ್ಪ ಪಟ್ಟಣಶೆಟ್ಟರ್, ಕಳಕಪ್ಪ ರೋಣದ, ಮುತ್ತಪ್ಪ ರೋಣದ, ಅಮರಯ್ಯ ಹಿರೇಮಠ, ನಿಂಗಪ್ಪ ಕೊರ್ಲಹಳ್ಳಿ, ಶರಣಬಸಪ್ಪ ದೇವರಮನಿ, ವೆಂಕಟೇಶ ಲಮಾಣಿ, ಚೆನ್ನಪ್ಪಗೌಡ ಪಾಟೀಲ, ಮಲ್ಲಯ್ಯ ಹಿರೇಮಠ, ಸುರೇಶ ಗೋಡಿ, ಶಂಕರಗೌಡ ಪಾಟೀಲ್, ಹೊನ್ನಪ್ಪ ಆರ್.ಭೋವಿ, ಆರ್.ಜಿ. ಕೊರ್ಲಹಳ್ಳಿ, ಕೆ.ಬಿ. ಕಂಬಳಿ ಇದ್ದರು.
ಡಂಬಳ ಮಠದ ಪ್ರಾಂಗಣದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗುತ್ತಿದ್ದು, ಇದಕ್ಕೆ ಭಕ್ತರು, ದಾನಿಗಳು ದಾಸೋಹಿಗಳ ಮೂಲಕ ಭಕ್ತರಿಂದ ಜರಗುತ್ತಿರುವುದು ಭಕ್ತರ ಕಾರ್ಯಕ್ಕೆ ಶ್ರೀ ತೋಂಟದ ಮದರ್ಧನಾರಿಶ್ವರರ ಆಶೀರ್ವಾದ ಸದಾ ಕಾಲ ಭಕ್ತರ ಮೇಲೆ ಇರಲಿದೆ. ಭಕ್ತರ ಕಾರ್ಯ ಪ್ರಶಂಸನೀಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.