ವಿಜಯಸಾಕ್ಷಿ ಸುದ್ದಿ, ಗದಗ: ನಾಡು-ನುಡಿ, ವಚನ ಸಾಹಿತ್ಯ, ಬಸವತತ್ವ ಹಾಗೂ ಸಮಾಜಕ್ಕಾಗಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ಗದುಗಿನ ತೋಂಟದಾರ್ಯ ಮಠದಿಂದ 2025ನೇ ಸಾಲಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಮರಣೋತ್ತರವಾಗಿ ನಾಡೋಜ ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಎಸ್.ಎಸ್. ಪಟಣಶೆಟ್ಟರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪೂರ್ವಾಶ್ರಮದಲ್ಲಿ ಡಾ. ಎಂ.ಎ. ಕಲಬುರ್ಗಿವರ ವಿದ್ಯಾರ್ಥಿಯಾಗಿದ್ದರು. ಡಾ. ಎಂ.ಎ. ಕಲಬುರ್ಗಿವರ ಬಹುಮುಖ ವ್ಯಕ್ತಿತ್ವ, ಬಹುಮುಖ ಪ್ರತಿಭೆಯೊಂದಿಗೆ ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರಾಗಿ, ಉನ್ನತ ಶ್ರೇಣಿಯ ಸಂಶೋಧಕರಾಗಿ, ಕನ್ನಡ ಅಧ್ಯಯನ ಪೀಠದ ದಕ್ಷ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾದರಿ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ನಿರ್ದೇಶಕರಾಗಿದ್ದರು.
ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿಗಳ ಉತ್ಕಟ ಚಿಂತಕರಾಗಿ, ಬಹುಶಿಸ್ತಿನ ಅಧ್ಯಯನದ ಬರಹಗಾರರಾಗಿದ್ದರು. ಅವರು ಬದುಕಿನುದ್ದಕ್ಕೂ ಮಾಡಿದ ಕಾರ್ಯ, ತೋರಿದ ದಾರಿ, ಬೀರಿದ ಪ್ರಭಾವ ನಾಡಿನ ಜನತೆಗೆ ಬೆರಗು ಹುಟ್ಟಿಸುವಂತಹವು. ಅವರದು ಸತ್ಯನಿಷ್ಠತೆ, ನ್ಯಾಯ-ನಿಷ್ಠುರತೆಯ ತತ್ವಬದ್ಧ ಬದುಕಾಗಿತ್ತು. ಅವರು ಕನ್ನಡ ಮತ್ತು ಬಸವಣ್ಣ ತಮ್ಮ ಪ್ರಾಣ ಜೀವಾಳವೆಂದು ನಂಬಿದ್ದರು. ಸತ್ಯ-ತತ್ವ-ಸಮಾಜಕ್ಕಾಗಿ ಪ್ರಾಣವನ್ನು ಪಣವಾಗಿ ಇಟ್ಟವರು. ಈ ಪ್ರಶಸ್ತಿ 5 ಲಕ್ಷ ರೂ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸನ್ನಿಧಿಯಲ್ಲಿ ಡಾ. ಎಂ.ಎ. ಕಲಬುರ್ಗಿ ಅವರ ಧರ್ಮಪತ್ನಿ ಉಮಾದೇವಿ ಎಂ. ಕಲಬುರ್ಗಿ ಇವರು ಸ್ವೀಕರಿಸುವರು ಎಂದು ಮಾಹಿತಿ ನೀಡಿದರು.



