ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನಿಗೆ ಯಾವುದೇ ಬಗೆಯ ಸಿರಿ-ಸಂಪತ್ತುಗಳಿದ್ದರೂ ಆರೋಗ್ಯಭಾಗ್ಯದ ಮುಂದೆ ಅವೆಲ್ಲವೂ ಗೌಣ. ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ನುಡಿದರು.
ಅವರು ಸೋಮವಾರ ನಗರದ ವಾರ್ಡ್ ನಂ.4ರ ಮಂಜುನಾಥ ನಗರದಲ್ಲಿ 2025ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಸಮಾಜ ಜಾಗೃತಿಗಾಗಿ 2ನೇ ದಿನದ ಪಾದಯಾತ್ರೆಯ ಸಮ್ಮುಖ ವಹಿಸಿ ಮಾತನಾಡಿದರು.
ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಜಾತ್ರೆಗಳ ಆಚರಣೆಗೆ ಹೊಸ ಭಾಷ್ಯ ಬರೆದ ಶ್ರೀಗಳಾಗಿದ್ದು, ಅನ್ನ-ಅಕ್ಷರ-ಆರೋಗ್ಯವನ್ನೊಳಗೊಂಡು ಜಾತ್ರೆಯಲ್ಲಿ ಜನಸಾಮಾನ್ಯರಿಗೆ ಶ್ರೇಯಸ್ಕರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಕನ್ನಡದ ಕುಲಗುರುಗಳೆಂದು ಖ್ಯಾತರಾಗಿದ್ದ ಅವರ ಚಿಂತನೆಗಳಿಗೆ ಅನುಗುಣವಾಗಿ ಜಾತ್ರಾ ಕಾರ್ಯಕ್ರಮಗಳನ್ನು ರೂಪಿಸಿರುವುದು ಶ್ಲಾಘನೀಯ. ವ್ಯಸನ ಮುಕ್ತ ಸಮಾಜಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಪ್ರಕಾಶ ವೆರ್ಣೇಕರ, ಹೊಳೆಬಸಪ್ಪ ಅಕ್ಕಿ, ಅರಮನಿ, ಸತೀಶ್ ಕುಂದಗೋಳ, ಬೂದಪ್ಪ ಹುಣಸೀಮರದ, ಮಂಜುನಾಥ ತಳವಾರ, ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ, ಉಪಾಧ್ಯಕ್ಷ ಕರವೀರಯ್ಯ ಕೋರಿಮಠ, ಪ್ರೊ. ಡಿ.ಜಿ. ಜೋಗಣ್ಣವರ, ಶೈಲಾ ಕೋಡೆಕಲ್ಲ, ಕಾರ್ಯದರ್ಶಿ ಶಿವಪ್ಪ ಕತ್ತಿ, ಸಹ ಕಾರ್ಯದರ್ಶಿ ದಶರಥ ಕೊಳ್ಳಿ, ಸಿದ್ಧರಾಮಪ್ಪ ಗೊಜನೂರ, ಸಂಘಟನಾ ಕಾರ್ಯದರ್ಶಿ ನಾಗಪ್ಪ ಸವಡಿ, ಕೋಶಾಧ್ಯಕ್ಷ ವೀರಣ್ಣ ಗೊಡಚಿ, ಸಹ ಕೋಶಾಧ್ಯಕ್ಷ ರಾಜಶೇಖರ ಲಕ್ಕುಂಡಿ ಹಾಗೂ ಶ್ರೀಮಠದ ಭಕ್ತರು, ಮಂಜುನಾಥ ನಗರದ ನಿವಾಸಿಗಳು ಉಪಸ್ಥಿತರಿದ್ದರು.
ಕೊಟ್ರೇಶ ಮೆಣಸಿನಕಾಯಿ ನಿರೂಪಿಸಿದರು. ಮಕ್ಕಳಿಗೆ ರುದ್ರಾಕ್ಷಿ ಧಾರಣೆ ನೆರವೇರಿಸಲಾಯಿತು. ನೂರಾರು ಭಕ್ತರು ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಸಮ್ಮುಖ ವಹಿಸಿದ್ದ ಪೂಜ್ಯರಾದ ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿAಗ ಮಹಾಸ್ವಾಮಿಗಳು ಮಾತನಾಡಿ, ಯುವ ಪೀಳಿಗೆ ವ್ಯಸನಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ದೇಶ ಕಟ್ಟುವ ಹೊಣೆಗಾರಿಕೆ ಹೊತ್ತ ಯುವ ಜನಾಂಗ ಈ ರೀತಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ದುರ್ದೈವ. ಯುವಶಕ್ತಿಯ ಮೇಲೆ ಅಪರಿಮಿತ ಅಭಿಮಾನ ಹೊಂದಿದ್ದ ವಿವೇಕಾನಂದರಂತಹ ಸಂತರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾತ್ವಿಕ ಜೀವನ ಸಾಗಿಸಬೇಕು ಎಂದರು.