ವಿಜಯಸಾಕ್ಷಿ ಸುದ್ದಿ, ರೋಣ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ಆಘಾತ ತಂದಿದೆ. ಅವರ ಮೌನದ ಹಿಂದೆ ದೇಶದ ಅರ್ಥಿಕ ಶಕ್ತಿ ಅಡಗಿತ್ತು. ಅವರು ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರುವ ಮೂಲಕ ದೇಶವನ್ನು ಕಾಪಾಡಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಪಕ್ಷದ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ಡಾ. ಸಿಂಗ್ ಅವರ ಅಗಲಿಕೆಗೆ ಕಂಬನಿ ಮಿಡಿದರು.
ಮಾಜಿ ಪ್ರದಾನಿ ದಿವಂಗತ ಡಾ. ಮನಮೋಹನ್ ಸಿಂಗ್ ಅವರು ತಮ್ಮ ಆಡಳಿತದ ಅವಧಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತಂದರು. ಜನರು ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ಆಹಾರ ಭದ್ರತೆಯನ್ನು ಜಾರಿಗೆ ತಂದ ಮೊದಲ ಪ್ರದಾನಿ ಎಂಬ ಹೆಗ್ಗಳಿಕೆಯನ್ನು ಪಡೆದವರು. ಅಲ್ಲದೆ ಮಾಹಿತಿ ಹಕ್ಕು ಸೇರಿ ಅತ್ಯಂತ ಪ್ರಮುಖವಾದ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ ದೇಶದ ಜನರು ಗುಳೆ ಹೊಗುವುದನ್ನು ತಪ್ಪಿಸಿದರು.
ಇಂತಹ ಮಹಾನ್ ಚೇತನ ನಮ್ಮನ್ನು ಅಗಲಿದ್ದು ಅತೀವ ದುಃಖ ತರಿಸಿದೆ ಎಂದ ಅವರು, ದೇವರು ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ವಿ.ಆರ್. ಗುಡಿಸಾಗರ, ಪುರಸಭೆ ಸದಸ್ಯ ಸಂಗನಗೌಡ ಪಾಟೀಲ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ವಿ.ಬಿ. ಸೋಮನಕಟ್ಟಿಮಠ, ತಾ.ಪಂ ಮಾಜಿ ಸದಸ್ಯರಾದ ಪ್ರಭು ಮೇಟಿ, ಅಂದಪ್ಪ ಬಿಚ್ಚೂರ, ಆನಂದ ಚಂಗಳಿ, ಇಸ್ಮಾಹಿಲ್ ಹೊರಪೇಟಿ, ಬಸವರಾಜ ತಳವಾರ, ಅಪ್ಪು ಗಿರಡ್ಡಿ, ಸಂಗು ನವಲಗುಂದ, ಅಸ್ಲಂ ಕೊಪ್ಪಳ, ಮಲ್ಲು ರಾಯನಗೌಡ್ರ, ಯಲ್ಲಪ್ಪ ಕಿರೇಸೂರ, ಸಂಜಯ ದೊಡ್ಡಮನಿ, ಶಿವು ಹುಲ್ಲೂರ, ಮೌನೇಶ ಹಾದಿಮನಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.