ದೊಡ್ಮನೆ ಕುಟುಂಬದ ಹಿರಿಯ ಜೀವ ನಾಗಮ್ಮ ನಿಧನರಾಗಿದ್ದಾರೆ. ವರನಟ ಡಾ.ರಾಜಕುಮಾರ್ ಅವರ ಸಹೋದರಿ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ಇಂದು ಡಾ.ರಾಜ್ ಕುಮಾರ್ ಅವರ ಹುಟ್ಟೂರು ದೊಡ್ಡಗಾಜನೂರಿನಲ್ಲಿ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಡಾ.ರಾಜ್ಕುಮಾರ್ ಕುಟುಂಬಸ್ಥರು ಭಾಗಿಯಾಗಿ ಅಗಲಿದ ಹಿರಿಯ ಚೇತನಕ್ಕೆ ನಮನ ಸಲ್ಲಿಸಿದರು.
ನಾಗಮ್ಮ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ರಾಜ್ ಕುಮಾರ್ ಕುಟುಂಬದವರು ದೊಡ್ಡಗಾಜನೂರಿಗೆ ಆಗಮಿಸಿದ್ದರು. ಶುಕ್ರವಾರ ಸಂಜೆಯೇ ರಾಘವೇಂದ್ರ ರಾಜಕುಮಾರ್ ಅವರು ತಮ್ಮ ಪತ್ನಿ ಹಾಗು ಮಕ್ಕಳಾದ ವಿನಯ್ ರಾಜ್ಕುಮಾರ್ ಹಾಗು ಯುವ ರಾಜ್ಕುಮಾರ್ ಅವರೊಂದಿಗೆ ತೆರಳಿದ್ದರು. ಇನ್ನೂ ಇನ್ನೂ ನಟ ಶಿವರಾಜ್ ಕುಮಾರ್ ಗೋವಾಗೆ ತೆರಳಿದ್ದರು. ಅತ್ತೆ ನಾಗಮ್ಮ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿಂದ ವಾಪಸ್ಸಾಗಿ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ತಮ್ಮ ಪುತ್ರಿಯರೊಂದಿಗೆ ಮಧ್ಯರಾತ್ರಿಯೇ ದೊಡ್ಡಗಾಜನೂರಿಗೆ ಆಗಮಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಮಗಳು ವಂದಿತಾ, ಡಾ.ರಾಜಕುಮಾರ್ ಅವರ ಪುತ್ರಿಯರು, ಮೊಮ್ಮಕ್ಕಳು, ಪಾರ್ವತಮ್ಮ ರಾಜಕುಮಾರ್ ಅವರ ಸಹೋದರರಾದ ಎಸ್ ಎ ಗೋವಿಂದರಾಜು, ಚಿನ್ನೇಗೌಡ ಸೇರಿದಂತೆ ಅಪಾರ ಸಂಖ್ಯೆಯ ಬಂದು ಬಳಗದವರು ನಾಗಮ್ಮ ಅವರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ನಾಗಮ್ಮ ಅವರು ಗುಡ್ಡೆ ಮಠ ದೀಕ್ಷೆ ಪಡೆದಿದ್ದು, ಗುಡ್ಡೆ ಮಠದ ರಾಘವೇಂದ್ರ ಸ್ವಾಮಿ ನೇತೃತ್ವದಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಡಾ.ರಾಜಕುಮಾರ್ ಅವರ ಗಾಜನೂರಿನ ಮನೆಯ ಹಿಂಭಾಗದ ತೋಟದಲ್ಲಿ ನಾಗಮ್ಮ ಪತಿ ವೆಂಕಟೇಗೌಡ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.