ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಪದವಿ ಕಾಲೇಜುಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಡಾ. ಎಸ್.ಎಫ್. ಸಿದ್ನೇಕೊಪ್ಪ ಮತ್ತು ಪ್ರೊ. ಎಸ್.ಜಿ. ಕಡ್ಡಿ ಅವರು ತಮ್ಮ ಸೇವೆಯುದ್ದಕ್ಕೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತ, ತಾವು ಸೇವೆ ಸಲ್ಲಿಸಿದ ಕಾಲೇಜುಗಳನ್ನು ಭೌತಿಕವಾಗಿ ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.
ಅವರು ಗದುಗಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಮತ್ತು ವಾಣಿಜ್ಯಶಾಸ್ತç ಪ್ರಾಧ್ಯಾಪಕ ಡಾ. ಎಸ್.ಎಫ್. ಸಿದ್ನೇಕೊಪ್ಪ ಹಾಗೂ ಗದುಗಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತç ಪ್ರಾಧ್ಯಾಪಕ ಪ್ರೊ. ಎಸ್.ಜಿ. ಕಡ್ಡಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಸನ್ಮಾನಿಸಿ ಮಾತನಾಡುತ್ತಿದ್ದರು.
1996ರಲ್ಲಿ ನೇಮಕವಾದ ಈ ಪ್ರಾಧ್ಯಾಪಕರಿಬ್ಬರೂ ತಮ್ಮ ತಮ್ಮ ವಿಷಯಗಳಲ್ಲಿ ಪ್ರಬುದ್ಧರಾಗಿದ್ದು, ಆಕರ್ಷಕ ಮತ್ತು ಪರಿಣಾಮಕಾರಿ ಬೋಧನಾ ಕೌಶಲ್ಯಗಳಿಂದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದತ್ತ ಪ್ರೇರೇಪಿಸಿದ ಫಲದಿಂದ ಇಂದು ಇವರ ಅನೇಕ ವಿದ್ಯಾರ್ಥಿಗಳು ಎಂ.ಕಾಂ., ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿಗಳನ್ನು ಪಡೆದು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಆ ವಿದ್ಯಾರ್ಥಿಗಳ ನಿರಂತರ ಹಾರೈಕೆ ಇವರಿಗಿರುತ್ತದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹುಲಕೋಟಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಲಕ್ಷ್ಮಣ ಮುಳಗುಂದ ಮತ್ತು ಆಯಾ ಕಾಲೇಜುಗಳ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇಬ್ಬರೂ ಪ್ರಾಧ್ಯಾಪಕರಿಗೆ ಶುಭಾಶಯ ಕೋರಿದರು.
ಉತ್ತಮ ಆಡಳಿತ ಕೌಶಲ್ಯ ಹೊಂದಿರುವ ಇವರಿಬ್ಬರೂ ತಾವು ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಕಾಲೇಜುಗಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಬೋಧಕರು, ಬೋಧಕೇತರ ಸಿಬ್ಬಂದಿಗಳ ಸಹಾಯ-ಸಹಕಾರದಿಂದ ಕಾಲೇಜುಗಳನ್ನು ಭೌತಿಕವಾಗಿ ಕಟ್ಟಿ ಬೆಳೆಸಿದ್ದಾರೆ.
ಇವರು ತಮ್ಮ ಸೇವಾವಧಿಯಲ್ಲಿ ಕೈಗೊಂಡಿರುವ ಕಾರ್ಯಗಳು ಸದಾಕಾಲ ಸ್ಮರಣೀಯವಾಗಿವೆ. ಇವರನ್ನು ಗೌರವಯುತವಾಗಿ ಬೀಳ್ಕೊಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಡಾ. ಶಿವಪ್ಪ ಕುರಿ ಹೇಳಿದರು.