ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ:ಪಟ್ಟಣದ ಗದಗ ರಸ್ತೆಗೆ ಹೊಂದಿಕೊಂಡಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಗರದ ಹತ್ತಿರ ನಿರ್ಮಾಣಗೊಳ್ಳಲಿರುವ ಡಾ.ಅಂಬೇಡ್ಕರ್ ವೃತ್ತದ ಕಾಮಗಾರಿ ಸುಮಾರು 6-7 ತಿಂಗಳಿಂದ ನಿಂತು ಹೋಗಿದ್ದು, ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕ ಸದಾನಂದ ಅಶೋಕ ನಂದೆಣ್ಣವರ ಆರೋಪಿಸಿದ್ದಾರೆ.
ಶುಕ್ರವಾರ ಡಾ. ಬಿಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಕಾಮಗಾರಿ ನಿಂತುಹೋಗಿರುವ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮ್ಮ ಅಕ್ರೋಶ ಹೊರಹಾಕಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ ಅವರನ್ನು ಅಲ್ಲಿನ ನಿವಾಸಿಗಳು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತನಾಡಿದ ಸದಾನಂದ ನಂದೆಣ್ಣವರ, ನಗರೋತ್ತಾನ ಯೋಜನೆಯಡಿಯಲ್ಲಿ ಅಂಬೇಡ್ಕರ್ ನಗರದ ಜಾಗೆಯಲ್ಲಿ ಅಂಬೇಡ್ಕರ್ ವೃತ್ತವನ್ನು ನಿರ್ಮಾಣ ಮಾಡಲು ೫ ಲಕ್ಷ ರೂಗಳ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕಾಮಗಾರಿ ಮುಂದುವರೆದಿಲ್ಲ ಎಂದು ಆರೋಪಿಸಿದರು.
ಗದುಗಿನಿಂದ ಬರುವ ರಸ್ತೆಗೆ ಹೊಂದಿಕೊಂಡಿರುವ ಈ ವೃತ್ತದ ಜಾಗೆಯಲ್ಲಿ ಡಾ.ಅಂಬೇಡ್ಕರ್ ಅವರ ಹೆಸರಿನಲ್ಲಿ ಸುಂದರವಾದ ಉದ್ಯಾನವನ್ನು ನಿರ್ಮಾಣ ಮಾಡಿದರೆ ಅದು ಊರಿಗೆ ಗೌರವದ ಪ್ರತೀಕವಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ವೃತ್ತದಲ್ಲಿ ಡಾ. ಅಂಬೇಡ್ಕರ್ರ ಪುತ್ಥಳಿಯನ್ನು ಸ್ಥಾಪಿಸುವ ಚಿಂತನೆ ಹೊಂದಿದ್ದೇವೆ. ಆದರೆ ಕಾಮಗಾರಿಯೇ ಪೂರ್ಣವಾಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಮುತುವರ್ಜಿ ವಹಿಸಿ ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವಣ್ಣೆಪ್ಪ ನಂದೆಣ್ಣವರ, ಮನೋಹರ ಕರ್ಜಗಿ, ಮಹಾಂತೇಶ ಗುಡಿಸಲಮನಿ, ದ್ಯಾಮೇಶ ಮ್ಯಾಗೇರಿ, ಪರುಶುರಾಮ ಗಡದವರ, ಮಲ್ಲೇಶ ಬಸವನಾಯ್ಕರ, ನಿಂಗಪ್ಪ ಬಾಲಣ್ಣವರ, ಪೃಥ್ವಿ ನಂದೆಣ್ಣವರ, ಸಂತೋಷ ನಂದೆಣ್ಣವರ, ಮಂಜು ಮಾದರ ಮುಂತಾದವರಿದ್ದರು.
ಜನರ ಅಕ್ರೋಶವನ್ನು ಎದುರಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ. ಗುತ್ತಿಗೆದಾರರಿಗೆ ಈ ಕುರಿತು ನೋಟಿಸ್ ನೀಡಿ ಕಾಮಗಾರಿ ಪ್ರಾರಂಭಿಸಲು ಆದೇಶ ಮಾಡುವದಾಗಿ ಭರವಸೆ ನೀಡಿದರು.



