ವಿಜಯಸಾಕ್ಷಿ ಸುದ್ದಿ, ಗದಗ : ಸದಾ ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಡಾ. ಶಾಬುದ್ದಿನ ಎಫ್.ಸಿದ್ನೇಕೊಪ್ಪ ಜೂನ್.29ರಂದು ನಿವೃತ್ತಿ ಹೊಂದಲಿದ್ದಾರೆ. ಇವರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಿಂದ ಜುಲೈ 1ರಂದು ಸನ್ಮಾನ ಜರುಗಲಿದೆ.
ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಾಗಿ 1996 ಜೂನ್ 24ರಂದು ಧಾರವಾಡ ಜಿಲ್ಲೆಯ ಅಳ್ನಾವರ ಸ.ಪ್ರ.ದ ಕಾಲೇಜಿನಲ್ಲಿ ವಾಣಿಜ್ಯಶಾಸ್ತç ವಿಷಯದ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದ ಇವರು, 2005ರಲ್ಲಿ ಕ.ವಿ.ವಿ.ಯ ಡಾ. ಎಸ್.ಜಿ. ಹುಂಡೇಕರ್ ಮತ್ತು ಹೂಗಾರ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದರು.
2007ರಲ್ಲಿ ಮುಳಗುಂದದ ಸ.ಪ್ರ.ದ ಕಾಲೇಜಿನ ಪ್ರಾಚಾರ್ಯರಾಗಿ, ನಂತರ 2011ರಲ್ಲಿ ಗದಗ ನಗರದ ಸ.ಪ್ರ.ದ ಕಾಲೇಜು ಪ್ರಾಚಾರ್ಯರಾಗಿ ನೂತನ ಕಟ್ಟಡಕ್ಕಾಗಿ ಶ್ರಮಿಸಿದ್ದಲ್ಲದೆ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲದಂತೆ ಪದವಿ ವಿದ್ಯಾರ್ಥಿಗಳ ಹಿತ್ತಕ್ಕಾಗಿ ಉತ್ತಮ ಕಲಿಕಾ ವಾತಾವರಣ, ಗುಣಮಟ್ಟದ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಮಲ್ಟಿ ಜಿಮ್, ಉತ್ತಮ ಭೋದನೆ, ಸಿಬ್ಬಂದಿ ವರ್ಗದ ಕಾರ್ಯಕ್ಷಮತೆಗೆ ಯುಜಿಸಿ ನ್ಯಾಕ್ ಪೀರ್ ಸಮಿತಿ ಬಿ+ ಮಾನ್ಯತೆ ಪಡೆಯುವಂತೆ ಮಾಡಿದ ಶ್ರೇಯಸ್ಸು ಇವರದಾಗಿದೆ.
ಜೂ.1ರಂದು ಸ.ಪ್ರ.ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಿವೃತ್ತಿಗೊಳ್ಳುತ್ತಿರುವ ಪ್ರಾಚಾರ್ಯ ಡಾ. ಎಸ್.ಎಫ್. ಸಿದ್ನೇಕೊಪ್ಪ ಅವರಿಗೆ ಬೆಳಿಗ್ಗೆ 11.30ಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಕಾನೂನು ಸಂಸದೀಯ, ಪ್ರವಾಸೋಧ್ಯಮ ಸಚಿವರಾದ ಎಚ್.ಕೆ. ಪಾಟೀಲ್, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಡಾ. ಆರ್.ಎಮ್. ಕುಬೇರಪ್ಪ, ಡಾ. ಐ.ಎ. ಪಿಂಚಾರ, ನೂತನ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದೇಶದ ಆಸ್ತಿಯನ್ನಾಗಿ ಮಾಡಿದಾಗ ಮಾತ್ರ ದೇಶದ ಭವಿಷ್ಯ ಉನ್ನತವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು, ಪಾಲಕರು ಶ್ರಮಿಸಬೇಕು ಎನ್ನುತ್ತಾರೆ ಡಾ. ಎಸ್.ಎಫ್. ಸಿದ್ನೇಕೊಪ್ಪ.
ವಿದ್ಯಾರ್ಥಿಗಳ ಭವಿಷ್ಯ ಕಟ್ಟಲು ತಮ್ಮನ್ನು ನಿರಂತರವಾಗಿ ತೊಡಗಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಪ್ರೀತಿಯ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತಿ ಅಂಚಿನವರೆಗೂ ಅನುಪಮ ಸೇವೆ ಸಲ್ಲಿಸಿದ ಪ್ರೊ. ಸಿದ್ನೇಕೊಪ್ಪ ಅವರ ಸೇವೆ ಸ್ಮರಣೀಯ.
– ಎಸ್.ವಿ. ಸಂಕನೂರ.
ವಿಧಾನ ಪರಿಷತ್ ಸದಸ್ಯರು.