ವಿಜಯಸಾಕ್ಷಿ ಸುದ್ದಿ, ಗದಗ: ನಾಟಕ ನವರಸಗಳಿಂದ ಕೂಡಿದ್ದು, ಸಾಹಿತ್ಯದ ಪ್ರಕಾರದಲ್ಲಿಯೇ ಶ್ರೇಷ್ಠವಾದುದು. ನಾಟಕಗಳಿಗೆ ಪ್ರಾಚೀನ ಕಾಲದಿಂದಲೂ ಮನ್ನಣೆ ಇದೆ. ಮನರಂಜನೆ ಜೊತೆಗೆ ಸಂದೇಶವನ್ನು ಹೊಂದಿ ವ್ಯಕ್ತಿಯ ಉನ್ನತಿಗೆ ಮತ್ತು ಸಾಮಾಜಿಕ ಸ್ವಾಸ್ಥ್ಯಯಕ್ಕೆ ಸಹಕಾರಿಯಾಗಿವೆ ಎಂದು ತೋಂಟದಾರ್ಯಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತೋಂಟದಾರ್ಯ ಕಲಾರಂಗದ ಸಹಯೋಗದಲ್ಲಿ ಗದುಗಿನ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಿದ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಆಧುನಿಕತೆಯ ಭರದಲ್ಲಿ ಹೆಣ್ಣು, ಹೊನ್ನು, ಮಣ್ಣಿನ ವ್ಯಾಮೋಹಗಳಿಗೆ ಒಳಗಾಗುವ ಮನುಷ್ಯ, ತನ್ನೊಳಗಿನ ಮನುಷ್ಯತ್ವವನ್ನು ಮರೆತು, ಸಂಬಂಧಗಳಿಗೆ ಸ್ಪಂದಿಸದೆ ತನ್ನ ಯಾಂತ್ರಿಕ ಬದುಕನ್ನು ಮುಂದುವರೆಸುತ್ತಿದ್ದಾನೆ. ಹಿರಿಯ ನಾಗರಿಕರ ಬದುಕು ಇಂದು ದುರ್ಭರವಾಗಿದೆ. ಯುವಜನರ ಮನಸ್ಥಿತಿ ಬದಲಾವಣೆಗೆ ಇಂತಹ ನಾಟಕಗಳು ಪರಿಣಾಮಕಾರಿ ಎಂದು ತಿಳಿಸಿದರು.
ವೇದಿಕೆ ಮೇಲೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಸಿ. ವಗ್ಗಿ, ಡಾ. ಉಮೇಶ ಪುರದ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಅನ್ನದಾನಿ ಹಿರೇಮಠ ಉಪಸ್ಥಿತರಿದ್ದರು. ಕಾರ್ಯದರ್ಶಿ ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕೋಶಾಧ್ಯಕ್ಷ ಡಿ.ಎಸ್. ಬಾಪುರಿ ವಂದಿಸಿದರು. ಧಾತ್ರಿ ರಂಗಸಂಸ್ಥೆ ಸಿರಿಗೇರಿ ಇವರು ಪ್ರಸ್ತುತ ಪಡಿಸಿದ ‘ಸೋರುತಿಹುದು ಸಂಬಂಧ ಎಂಬ ನಾಟಕ ನೋಡುಗರ ಮನವನ್ನು ಕಲಕಿತು.
ಕಾರ್ಯಕ್ರಮದಲ್ಲಿ ಅಂದಾನಪ್ಪ ವಿಭೂತಿ, ಡಾ. ಅನಂತ ಶಿವಪೂರ, ಡಾ. ವಾಣಿ ಶಿವಪೂರ, ಐ.ಕೆ. ಕಮ್ಮಾರ, ಎಸ್.ಎಸ್. ಕಳಸಾಪೂರಶೆಟ್ಟರ, ರತ್ನಕ್ಕ ಪಾಟೀಲ, ಜಯದೇವ ಭಟ್, ಬಿ.ಬಿ. ಪಾಟೀಲ, ರಾಜಶೇಖರ ಕರಡಿ, ವಿ.ಎಸ್. ದಲಾಲಿ, ಮಲ್ಲಪ್ಪ ಡೊಣಿ, ಆರ್.ಟಿ. ನಾರಾಯಣಪೂರ, ಯಲ್ಲಪ್ಪ ಹಂದ್ರಾಳ, ಆರ್.ಜಿ. ಹಾಸಲಕರ, ಬಿ.ಎಲ್. ಚವ್ಹಾಣ, ಗುರುಪಾದ ಕಟ್ಟಿಮನಿ, ಎಸ್.ಎಂ. ಕಾತರಕಿ, ಭಾಗ್ಯಶ್ರೀ ಹುರಕಡ್ಲಿ, ಪಾರ್ವತಿ ಬೇವಿನಮರದ, ಶೈಲಜಾ ಗಿಡ್ನಂದಿ, ಶಾಂತಾ ಗಣಪ್ಪನವರ, ಎಸ್.ಸಿ. ಹುಯಿಲಗೋಳ, ಅಶೋಕ ಹಾದಿ, ಸತೀಶ ಚನ್ನಪ್ಪಗೌಡ್ರ, ವಿ.ಎನ್. ಬೇಂದ್ರೆ, ಅಮೃತೇಶ ಹೊಸಳ್ಳಿ, ಶಶಿಕಾಂತ ಕೊರ್ಲಹಳ್ಳಿ, ಬಸವರಾಜ ಗಣಪ್ಪನವರ, ಎಲ್. ತಿಪ್ಪಾನಾಯ್ಕ, ಐ.ಎಚ್. ಹಳ್ಯಾಳ ಮೊದಲಾದವರು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕನ್ನಡ ರಂಗಭೂಮಿಗೆ ಗದುಗಿನ ಕೊಡುಗೆ ಅಪಾರವಾಗಿದೆ. ಅಂಗೈಯಲ್ಲಿ ಮನರಂಜನೆ ದೊರೆಯುವ ಈ ಸಂದರ್ಭದಲ್ಲಿ ನಮ್ಮ ಪರಂಪರೆಯನ್ನು ಮರೆತರೆ ನಮ್ಮನ್ನು ನಾವೇ ಮರೆತಂತೆ. ಸಾಹಿತ್ಯ, ಸಂಗೀತ, ಕಲೆ ಮನುಷ್ಯರನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವ ಇವುಗಳ ಅಭಿವೃದ್ಧಿಗೆ ಮುಖ್ಯ ಎಂದು ತಿಳಿಸಿದರು.