ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶಗಳ ಸಂಜೀವಿನಿ ಮಹಿಳಾ ಗುಂಪಿನ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಉತ್ತೇಜನ ಕಲ್ಪಿಸುವ ಉದ್ದೇಶದಿಂದ ಈ ಮಾಸಿಕ ಸಂತೆಗೆ ಚಾಲನೆ ನೀಡಲಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದರು.
ಅವರು ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ತಾಲೂಕು ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಮಾಸಿಕ ಸಂತೆಯ ಆಯೋಜನೆ ಮೂಲಕ ಮಹಿಳಾ ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಹಾಗೂ ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಪರಿಚಯಿಸುವುದರಿಂದ ಹೆಚ್ಚು ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಲು ಉಪಯುಕ್ತವಾಗಿದೆ ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಗ್ರಾ.ಪಂ ಸದಸ್ಯ ಯಲ್ಲಪ್ಪ ತಳವಾರ ಮಾತನಾಡಿ, ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸಶಕ್ತರಾಗಲು ಸಹಕಾರಿಯಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷೆ ಸಂಗೀತಾ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯ ಬಸಪ್ಪ ಕರ್ಜಗಿ, ಆಕಳಂಡಪ್ಪ ಕರ್ಜಕಣ್ಣವರ, ಶೈಲಾ ಹೂಗಾರ, ರೇಣುಕಾ ಆತಡಕರ, ಸಂತೋಷ ತಾಂದಳ, ಲಲಿತಾ ತವರಿ, ಜಯಶ್ರೀ ಕರ್ಜಗಿ, ಶಿವಪ್ಪ ಕುರಿ, ಗ್ರಾಮದ ಪ್ರಮುಖರಾದ ಮಂಜುನಾಥ ಮಹೇಂದ್ರಕರ, ಕುಮಾರಸ್ವಾಮಿ ವಿಕ್ತಕಮಠ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಕೊರಕನವರ, ಸಂಜೀವಿನಿ ಯೋಜನೆ ಒಕ್ಕೂಟದ ಅಧ್ಯಕ್ಷೆ ನೇತ್ರಾವತಿ ಮಹೀಂದ್ರಕರ, ವಲಯ ಮೇಲ್ವಿಚಾರಕರಾದ ಬಸವರಾಜ ಗುತ್ತೆದಾರ, ಪಿ.ಎಂ. ಪಾಟೀಲ, ಸಂಜೀವಿನಿ ಯೋಜನೆ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿ ಮತ್ತು ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಮಾರುತಿ ಕೊಡ್ಲಿ ಸ್ವಾಗತಿಸಿದರು. ವ್ಯವಸ್ಥಾಪಕ ವಿರೂಪಾಕ್ಷ ಕೊಣವರ ನಿರೂಪಿಸಿ ವಂದಿಸಿದರು.