ಬಾಗಲಕೋಟೆ:- ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಂತೆ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ನಿಧಾನವಾಗಿ ಹೋಗಪ್ಪ ಎಂದು ಬುದ್ಧಿವಾದ ಹೇಳಿದಕ್ಕೆ ಎನ್ಡಬ್ಲೂಕೆಎಸ್ಆರ್ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಕಟ್ಟಿಗೆಯಿಂದ ಹೊಡೆದಿರುವ ಘಟನೆ ಜರುಗಿದೆ.
ಚಲಿಸುತ್ತಿದ್ದ NWKRTC ಬಸ್ಗೆ ಬೈಕ್ ಸವಾರ ಅಡ್ಡ ಬಂದಿದ್ದರು. ಆಗ, ಬಸ್ ಚಾಲಕ ನಿಧಾನವಾಗಿ ಹೋಗಪ್ಪ ಅಂತ ಬುದ್ದಿವಾದ ಹೇಳಿದ್ದಾರೆ. ಇಷ್ಟಕ್ಕೇ NWKRTC ಬಸ್ ಚಾಲಕನ ಜೊತೆ ಬೈಕ್ ಸವಾರ ವಾಗ್ವಾದಕ್ಕೆ ಇಳಿದಿದ್ದಾನೆ. ಚಾಲಕನಿಗೆ ನಿಂದಿಸಿ, ಬಳಿಕ ತನ್ನ ತಂದೆಗೆ ಕರೆ ಮಾಡಿದ್ದಾನೆ.
ಜಗದಾಳ ಬಳಿ ಬೊಲೆರೊ ವಾಹನದಲ್ಲಿ ಜನರನ್ನು ಕರೆತಂದು ಚಾಲಕ ಮತ್ತು ನಿರ್ವಾಹಕರ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



