ಬೆಂಗಳೂರು:- ಯಲಹಂಕದ ಮಾರುತಿ ನಗರದಲ್ಲಿ ಮನಕಲಕುವ ಘಟನೆ ನಡೆದಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾಕು ನಾಯಿ ಮೇಲೆ ಕಾರೊಂದು ಹರಿದುಕೊಂಡು ಹೋದ ಅಮಾನವೀಯ ಕೃತ್ಯ ಸೆರೆಯಾಗಿದೆ.
ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ನಾಯಿ ಮಾಲೀಕ ದೂರು ನೀಡಿದ್ದು ಕಾರು ಚಾಲಕ ಕ್ಷಮೆ ಕೇಳಿದ್ದಾನೆ. ಮತ್ತೊಂದೆಡೆ ಕೆಲ ಕ್ಯಾಬ್ ಚಾಲಕರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಯಲಹಂಕದ ಮಾರುತಿ ನಗರ 17 ನೇ ಕ್ರಾಸ್ ನಲ್ಲಿ ಜುಲೈ 31ರಂದು ಸಾಕು ನಾಯಿ ಮರಿಯ ಮೇಲೆ ಕಾರು ಹರಿದಿತ್ತು. ಕಾರು ಚಾಲಕ ಸ್ವಲ್ಪವೂ ಮಾನವೀಯತೆ ತೋರದೆ ನಾಯಿಯ ಮೇಲೆ ಕಾರು ಹತ್ತಿಸಿ ಕಾರನ್ನು ನಿಲ್ಲಿಸದೇ ಹೋಗಿದ್ದ. ಘಟನೆ ನಡೆದ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಾಯಿ ಸಾವನ್ನಪಿದೆ.
ನಾಯಿ ಸಾವಿನ ಬಳಿಕ ಮಾಲೀಕ ಸಿಸಿ ಕ್ಯಾಮರಾ ಚೆಕ್ ಮಾಡಿದ್ದು ನಾಯಿ ಮೇಲೆ ಕ್ಯಾಬ್ ಹರಿದಿರುವ ದೃಶ್ಯ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಮಾಲೀಕ ನಾಯಿ ಮೇಲೆ ಕಾರು ಹತ್ತಿದ್ರು ಕಾರು ನಿಲ್ಲಿಸದೆ ಹೋಗಿದಕ್ಕೆ ದೂರು ದಾಖಲಿಸಿದ್ದಾರೆ.
ದೂರು ನೀಡ್ತಿದ್ದಂತೆ ಕಾರು ಚಾಲಕ ನಿನ್ನೆ ನಾಯಿ ಮಾಲೀಕನ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಈ ವೇಳೆ ಕಾರು ಚಾಲಕನಿಗೆ ಮಾನವೀಯತೆ ಇಲ್ವಾ ಅಂತ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.