ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬುಧವಾರ ಶಿರಹಟ್ಟಿ ತೆಗ್ಗಿನಭಾವನೂರ ಗ್ರಾಮ, ಕುಸಲಾಪೂರ ಗ್ರಾಮ ಹಾಗೂ ವರವಿ ಗ್ರಾಮಗಳಲ್ಲಿ ತಲಾ 50 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ-5105 ಯೋಜನೆಯಡಿ 2.75ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ಆಯ್ದ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲಾಗುವುದು. ಮತಕ್ಷೇತ್ರದಲ್ಲಿ ಹಾನಿಗೀಡಾದ ಬಹುತೇಕ ಗ್ರಾಮಗಳ ರಸ್ತೆಗಳ ಸುಧಾರಣೆಗೆ ಸಂಬಂಧಿಸಿದ ಇಲಾಖೆಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮತಕ್ಷೇತ್ರದಲ್ಲಿ ಈಗಾಗಲೇ ಗದಗ-ಇಳಕಲ್ ರಾಜ್ಯ ಹೆದ್ದಾರಿ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದ್ದು, ಪೂರ್ಣಗೊಂಡ ನಂತರ ಸಾರ್ವಜನಿಕರು ತಾಲೂಕಾ ಕೇಂದ್ರಕ್ಕಾಗಲೀ, ಜಿಲ್ಲಾ ಕೇಂದ್ರಕ್ಕಾಗಲೀ ತೆರಳಲು ಸುಗಮ ಸಂಚಾರ ಸಾಧ್ಯವಾಗಲಿದೆ. ಹಲವು ಕಡೆಗಳಲ್ಲಿ ರಸ್ತೆ ಸುಧಾರಣೆ ಕೆಲಸಗಳು ಪ್ರಗತಿಯಲ್ಲಿದ್ದು, ಇವುಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ತಾ.ಪಂ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಶಂಕರ ಮರಾಠೆ, ಪ್ರವೀಣಗೌಡ ಪಾಟೀಲ, ಪರಸನಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಶಾಂತಪ್ಪ ಮುರಗಿ, ವಿಜಯಗೌಡ ಪಾಟೀಲ, ವೆಂಕನಗೌಡ ಪಾಟೀಲ, ಛಬ್ಬಿ ಗ್ರಾ.ಪಂ ಸದಸ್ಯೆ ಭಾರತಿ ನಿಂಗಪ್ಪ ತಾರೀಕೊಪ್ಪ, ದುರಗಪ್ಪ ಹರಿಜನ, ಮಲಕಾಜಪ್ಪ ಶೆಟ್ಟರ, ಚನಬಸವ್ವ ಗುಡಗೇರಿ, ಗುಡದಪ್ಪ ತಳವಾರ, ಗಂಗಾಧರ ಶೆಟ್ಟರ, ರಾಮಣ್ಣ ತಳವಾರ, ಮುತ್ತಣ್ಣ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.