ಮಲಯಾಳಂ ಚಿತ್ರರಂಗದಲ್ಲಿ ಒಂದಲ್ಲ ಒಂದು ಸುದ್ದಿಗಳು ನಡೆಯುತ್ತಲೆ ಇದೆ. ಅದರಲ್ಲೂ ಡ್ರಗ್ಸ್ ಪ್ರಕರಣದಲ್ಲಿ ಒಬ್ಬರ ನಂತರ ಮತ್ತೊಬ್ಬರು ಸಿಕ್ಕಿ ಬೀಳುತ್ತಲೆ ಇದ್ದಾರೆ. ಕೆಲ ದಿನಗಳ ಹಿಂದಷ್ಟೆ ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಇದೀಗ ಮಲಯಾಳಂ ಚಿತ್ರರಂಗದ ಇಬ್ಬರು ಪ್ರತಿಭಾವಂತ ನಿರ್ದೇಶಕರು ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.
‘ಉಂಡ’, ‘ಲವ್’, ‘ತಲ್ಲುಮಾಲ’ ಇತ್ತೀಚೆಗಷ್ಟೆ ಬಿಡುಗಡೆ ಆದ ‘ಅಲಪುಳಲ್ ಜಿಮ್ಕಾನಾ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿರುವ ಖಲೀದ್ ರೆಹಮಾನ್ ಹಾಗೂ ಮಲಯಾಳಂ ಸಿನಿಮಾ ‘ತಮಾಶಾ’, ‘ಭೀಮಂಟೆ ವಾಳಿ’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಹಶ್ರಫ್ ಹಮ್ಜಾ ಅವರುಗಳನ್ನು ಡ್ರಗ್ಸ್ ಪ್ರಕರಣದಲ್ಲಿ ಕೇರಳ ಪೊಲೀಸರು ಬಂಧಿಸಿದ್ದು ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಸಮೀರ್ ತಾಹಿರ್ ಎಂಬುವರ ಕೊಚ್ಚಿ ಅಪಾರ್ಟ್ಮೆಂಟ್ನಲ್ಲಿ ಖಲೀದ್ ರೆಹಮಾನ್, ಹಶ್ರಫ್ ಹಮ್ಜಾ ಇನ್ನೂ ಒಬ್ಬ ವ್ಯಕ್ತಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ಸಮಯದಲ್ಲಿ ನಿಖರ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶನಿವಾರ ತಡರಾತ್ರಿ 3 ಗಂಟೆಗೆ ಪೊಲೀಸರು ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಇವರ ಬಳಿ 1.5 ಗ್ರಾಂ ಹೈಡ್ರೋ ಗಾಂಜಾ ದೊರಕಿದ್ದು, ಮೂವರನ್ನು ಬಂಧಿಸಿದ ಪೊಲೀಸರು ಬಳಿಕ ಸ್ಟೇಷನ್ ಬೇಲ್ ನೀಡಿ ಕಳಿಸಿಕೊಟ್ಟಿದ್ದಾರೆ. ಆದರೆ ಮೂವರ ಮೇಲೆ ಡ್ರಗ್ಸ್ ಪ್ರಕರಣ ದಾಖಲಾಗಿದ್ದು, ಹೈಡ್ರೋ ಗಾಂಜಾದ ಮೂಲದ ಬಗ್ಗೆ ತನಿಖೆ ಜಾರಿಯಲ್ಲಿದೆ.
ಮಲಯಾಳಂ ಚಿತ್ರರಂಗದಲ್ಲಿ ಒಂದರ ಹಿಂದೊಂದರಂತೆ ಡ್ರಗ್ಸ್ ಪ್ರಕರಣಗಳು ಹೊರ ಬೀಳುತ್ತಲೇ ಇವೆ. ಈ ಹಿಂದೆ ಮಲಯಾಳಂ ನಟರಾದ ಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಅವರುಗಳ ಮೇಲೆಯೂ ಸಹ ಡ್ರಗ್ಸ್ ಸೇವನೆ ಆರೋಪ ಬಂದು ಅವರ ಮೇಲೆ ಚಿತ್ರರಂಗದಿಂದ ನಿಷೇಧ ಹೇರಲಾಗಿತ್ತು. ಇದೀಗ ಒಬ್ಬರ ಹಿಂದೊಬ್ಬರಂತೆ ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬರುತ್ತಿದ್ದಾರೆ.