ವಿಜಯಸಾಕ್ಷಿ ಸುದ್ದಿ, ಗದಗ: ಮದ್ಯ, ಮಾದಕ ವಸ್ತುಗಳು ರಾಷ್ಟ್ರದ ಅಭಿವೃದ್ಧಿಗೆ ಮಾರಕವಾದ ವಸ್ತುಗಳಾಗಿವೆ. ಇಂದಿನ ಯುವ ಜನತೆ ಮಾದಕ ವಸ್ತುಗಳ ಸೇವನೆಯನ್ನು ಪ್ರತಿಷ್ಠೆಯನ್ನಾಗಿಸಿಕೊಳ್ಳುವದರ ಮೂಲಕ ತಮ್ಮ ಆರೋಗ್ಯಕ್ಕಷ್ಟೇ ಅಲ್ಲದೇ ದೇಶದ ಅಭಿವೃದ್ಧಿಗೂ ಮಾರಕವಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸುರೇಶ ನಾಡಗೌಡರ ನುಡಿದರು.
ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ಉಪನ್ಯಾಸ ಮತ್ತು ಜನಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಗಿರೀಶ ದೀಕ್ಷಿತ್ ಮಾತನಾಡಿ, ಹುಟ್ಟಿನಿಂದ ಯಾರೂ ಕೂಡ ವ್ಯಸನಿಗಳಾಗಿರುವುದಿಲ್ಲ. ಆದರೆ ದಿನ ಕಳೆದಂತೆ ವ್ಯಸನಗಳಿಗೆ ದಾಸರಾಗುತ್ತಾರೆ. ಇಂದಿನ ಯುವ ಜನತೆಗೆ ದುಶ್ಚಟಗಳಿಗೆ ದಾಸರಾಗುವದು ಎಂದರೆ ಒಂದು ಪ್ರತಿಷ್ಠೆಯ ಸಂಗತಿಯಾಗಿರುವದು ಕಳವಳಕರಿಯಾಗಿದೆ. ದುಶ್ಚಟಗಳಿಂದಾಗುವ ಪರಿಣಾಮಗಳ ಕುರಿತು ಅರಿವು ಹೊಂದುವದರ ಜೊತೆಗೆ ತಮ್ಮ ನೆರೆಹೊರೆಯವರಿಗೂ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಮುಂದಾಗುವಂತೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಮನರೋಗ ತಜ್ಞರಾದ ಡಾ. ರಾಘವೇಂದ್ರ ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವದು ಕಳವಳಕಾರಿಯಾಗಿದೆ. ಇವುಗಳ ಬಳಕೆಯಿಂದ ಆರೊಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಪ್ರತಿಯೊಬ್ಬರೂ ಜಾಗೃತರಾಗುವದು ಅವಶ್ಯಕವಾಗಿದೆ. ಯುವ ಜನತೆ ಇಂದು ಅನೇಕ ದುಶ್ಚಟಗಳ ದಾಸರಾಗುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲೆ ನಿಧಾನವಾಗಿ, ಗಂಭೀರವಾದ ಪರಿಣಾಮ ಬೀರುತ್ತವೆ. ಮನೆಯಲ್ಲಿನ ಹಿರಿಯರ ಸಿಗರೇಟ್ ಸೇವನೆ, ಮದ್ಯ ಸೇವನೆಯಂತಹ ದುಶ್ಚಟಗಳಿಂದ ಆಕರ್ಷಿತರಾಗಿ ಯುವಜನತೆ ಮನೆಯಿಂದಲೇ ಅನೇಕ ದುಶ್ಚಟಗಳಿಗೆ ದಾಸಾರಾಗುತ್ತಿದ್ದಾರೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಕಾರ್ಯಕ್ರಮದಲ್ಲಿ ಡಾ. ಅಬ್ದುಲ ಅಜೀಜ್ ಮುಲ್ಲಾ ಸೇರಿದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರೀತಿ ನೂಲ್ವಿ ಪ್ರಾರ್ಥಿಸಿದರು. ನಾಗರತ್ನ ನಾಯ್ಕ ಸ್ವಾಗತಿಸಿದರು, ಚಂದ್ರಪ್ಪ ಬಾರಂಗಿ ಕಾರ್ಯಕ್ರಮ ನಿರೂಪಿಸಿದರು. ಡಾ. ಸಂಧ್ಯಾ ವಂದಿಸಿದರು. ರಾಜಶೇಖರ ಹಿರೇಮಠ ಹಾಗೂ ತಂಡದವರು ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಗೀತೆಗಳನ್ನು ಪ್ರಚುರಪಡಿಸಿದರು.
ದುಶ್ಚಟಗಳಿಗೆ ದಾಸರಾಗಲು ಅನೇಕ ಕಾರಣಗಳಿರುತ್ತವೆ. ಆದರೆ ದುಶ್ಚಟಗಳಿಗೆ ಒಮ್ಮೆ ದಾಸರಾದರೆ ಇದರಿಂದ ಹೊರಬರುವದು ಕಷ್ಟ ಸಾಧ್ಯವಾಗುತ್ತದೆ. ದುಶ್ಚಟಗಳಿಂದಾಗಿ ಜಠರ, ಹ್ಲದಯ, ನರವ್ಯೂಹದ ಸಮಸ್ಯೆ, ಲೈಂಗಿಕ ಕಾಯಿಲೆ, ಮೂತ್ರಕೋಶ ಸಂಬಂಧಿತ ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇದರ ಜೊತೆಗೆ ಮರೆವಿನ ಕಾಯಿಲೆ, ಭಾವನೆಗಳಿಗೆ ಸಂಬಂಧಿಸಿದ, ನಿದ್ರಾಹೀನತೆ, ಮೂರ್ಚೆಯಂತಹ ಮಾನಸಿಕ ಅಸ್ವಸ್ಥತೆಗಳಷ್ಟೇ ಅಲ್ಲದೆ, ಸಮಾಜದಲ್ಲಿ ಎಲ್ಲರಿಂದ ತಿರಸ್ಕೃತಗೊಂಡು ತಮ್ಮ ಸ್ಥಾನಮಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಡಾ. ರಾಘವೇಂದ್ರ ಪಾಟೀಲ ತಿಳಿಸಿದರು.