ಒಣಮೆಣಸಿನಕಾಯಿ ಖರೀದಿಗೆ ಇ-ಟೆಂಡರ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: 2024-25ನೇ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿಯಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ದರ ಪ್ರತಿ ಕ್ವಿಂಟಲ್‌ಗೆ ರೂ. 10,589.20ಗಳು ನಿಗದಿಪಡಿಸಲಾಗಿದೆ. ಒಣಮೆಣಸಿನಕಾಯಿ ಬೆಳೆಗಾರರ ಹಿತದೃಷ್ಟಿಯಿಂದ ಈ ಯೋಜನೆಯ ಅನುಕೂಲ ಪಡೆಯಲು ಸಾಧ್ಯವಾಗುವಂತೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿಯಲ್ಲಿ ಇ ಟೆಂಡರ್ ನಡೆಸುತ್ತಿರುವ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಣಮೆಣಸಿನಕಾಯಿ ಮಾರಾಟ ಮಾಡಲು ಬರುವ ರೈತರು ನೋಂದಣಿ ಕಾರ್ಯವನ್ನು ತಂತ್ರಾಂಶದಲ್ಲಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

Advertisement

ಒಣಮೆಣಸಿನಕಾಯಿ ಉತ್ಪನ್ನವನ್ನು ಖರೀದಿಸುವ ಕುರಿತು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಣಮೆಣಸಿನಕಾಯಿ ಉತ್ಪನ್ನದ ಗೇಟ್ ಎಂಟ್ರಿಯನ್ನು ಗದಗ ಎಪಿಎಂಸಿಯಲ್ಲಿ ತಂತ್ರಾಂಶದಲ್ಲಿ ರೈತರು ದಾಖಲಿಸುವ ಕಾರ್ಯವನ್ನು ನಿರ್ವಹಿಸಬೇಕು. ಪ್ರತಿ ದಿವಸ ಆವಕವಾಗುವ ಒಣಮೆಣಸಿನಕಾಯಿ ಪ್ರಮಾಣ, ರೈತರ ಸಂಖ್ಯೆ ಇತ್ಯಾದಿ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 35855.89 ಹೆಕ್ಟೇರ್ ಒಣಮೆಣಸಿನಕಾಯಿ ಹುಟ್ಟುವಳಿ ಬಿತ್ತನೆ ಮಾಡಿದ್ದು, ಪ್ರತಿ ಹೆಕ್ಟೇರ್‌ಗೆ 8 ಟನ್ ಇಳುವರಿ ಪ್ರಮಾಣವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು, ಸಹಕಾರ ಸಂಘಗಳ ಇಲಾಖೆ ಉಪನಿಬಂಧಕರು, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಹಾಜರಿದ್ದರು.

ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಧಾ ಆರ್ ಬಂಡಿ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಡ್ಡಾಯವಾಗಿ ಇ ಟೆಂಡರ್ ಮೂಲಕ ಮಾತ್ರ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾಗಿದ್ದು, ಗದಗ ಜಿಲ್ಲೆಯಲ್ಲಿ ಗದಗ ಮಾರುಕಟ್ಟೆ ಹೊರತುಪಡಿಸಿ ನರಗುಂದ, ಕ್ಷ್ಮೇಶ್ವರ, ಹೊಳೆ ಆಲೂರ ಹಾಗೂ ಮುಂಡರಗಿ ಮಾರುಕಟ್ಟೆಗಳಲ್ಲಿ ಒಣಮೆಣಸಿನಕಾಯಿ ಹುಟ್ಟುವಳಿ ಇ ಟೆಂಡರ್ ನಡೆಸಲು ಕಮಿಷನ್ ಏಜೆಂಟರು (ದಲ್ಲಾಲರು) ಹಾಗೂ ಖರೀದಿದಾರರು ಇರುವುದಿಲ್ಲ ಎಂದು ಸಭೆಗೆ ವಿವರಿಸಿದರು.


Spread the love

LEAVE A REPLY

Please enter your comment!
Please enter your name here