ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಾನವನ ದುರಾಸೆ, ವೈಭವದ ಜೀವನದಿಂದ ಇಂದು ಪ್ರಕೃತಿ ನಾಶವಾಗುತ್ತಿದೆ. ನಾವು ಪ್ರಕೃತಿಯ ಸೌಜನ್ಯವನ್ನು ಕಾಪಾಡಿಕೊಳ್ಳದಿದ್ದರೆ ಜೀವಿಗಳು ಅಪಾಯದ ಮಟ್ಟಕ್ಕೆ ಹೋಗುತ್ತವೆ. ಗಿಡ-ಮರಗಳು ಹಸಿರನ್ನು ನೀಡುವುದರೊಂದಿಗೆ ಜೀವಿಗಳಿಗೆ ಉಸಿರನ್ನು ನೀಡುತ್ತವೆ. ಅವುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಡಾ. ಆರ್.ಕೆ. ಗಚ್ಚಿನಮಠ ಹೇಳಿದರು.
ನರೇಗಲ್ಲ ಶ್ರೀ ಜಗದ್ಗುರು ಪಂಚಾಚಾರ್ಯ ಗ್ರಾಮಿಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವಿಗಳ ಆಶ್ರಯ ತಾಣ ಭೂಮಿ. ಭೂಮಿಯ ಮಣ್ಣಿನ ಸತ್ವವನ್ನು ನಾವು ಕಾಪಾಡಿಕೊಳ್ಳದೆ ಹೋದರೆ, ನಾವು ವಿನಾಶದ ಹಂತಕ್ಕೆ ತಲುಪುತ್ತೇವೆ. ಇಂದಿನದು ಪ್ಲಾಸ್ಟಿಕ್ ಯುಗ. ರಾಸಾಯನಿಕ ಪದಾರ್ಥಗಳ ಬಳಕೆ ಮಣ್ಣಿನಲ್ಲಿ ಅನೇಕ ಜೀವಸತ್ವಗಳನ್ನು ನಾಶ ಮಾಡುತ್ತಿವೆ. ಭಾರತೀಯ ಕೃಷಿಯ ಹಳೆಯ ಸಾವಯವ ಪದ್ಧತಿ ಭೂಮಿಯಲ್ಲಿಯ ಜೀವಾಣುಗಳನ್ನು ಪೋಷಣೆ ಮಾಡುವುದರೊಂದಿಗೆ, ಉತ್ತಮ ಆಹಾರದ ಉತ್ಪಾದನೆ, ಪ್ರಕೃತಿಯ ಹಾಗೂ ಜೀವ ವೈವಿಧ್ಯತೆಗಳನ್ನು ಸಮೃದ್ಧವಾಗಿ ಬೆಳಸುವಂತಹುದಾಗಿತ್ತು. ಇಂದಿನ ಒಕ್ಕಲುತನ ಗಮನಿಸಿದರೆ ನಾವು ಬಹಳಷ್ಟು ಅಪಾಯಕಾರಿ ಮಟ್ಟದ ಬೆಳವಣಿಗೆಯಲ್ಲಿ ಪ್ರಕೃತಿಯ ನಾಶದೊಂದಿಗೆ ನಾವು ಸಹ ವಿನಾಶದ ಹಂತಕ್ಕೆ ತಲುಪುತ್ತಿರುವುದರ ಮುನ್ಸೂಚನೆಯಾಗಿದೆ ಎಂದರು.
ಮುಖ್ಯ ಶಿಕ್ಷಕಿ ಎನ್.ಎಸ್.ಆರ್. ಹಿರೇಮಠ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.