HomeBengaluru Newsಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ಶೋಧ; ‘ಇದು ದಾಳಿ ಅಲ್ಲ, ಸರ್ಚ್’ ಎಂದ ಸಚಿವ!

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ಶೋಧ; ‘ಇದು ದಾಳಿ ಅಲ್ಲ, ಸರ್ಚ್’ ಎಂದ ಸಚಿವ!

For Dai;y Updates Join Our whatsapp Group

ಬೆಂಗಳೂರು: ತಮ್ಮ ನಿವಾಸ ಹಾಗೂ ಇತರ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಶೋಧ ಕಾರ್ಯಾಚರಣೆ ರಾಜಕೀಯ ಪ್ರೇರಿತವಾಗಿರಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ಶೋಧಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಅಧಿಕಾರಿಗಳ ಬಳಿ ಯಾವುದಾದರೂ ಮಾಹಿತಿ ಇರಬಹುದು. ಆದರೆ, ನೋಟಿಸ್ ನೀಡಿ ಮಾಹಿತಿ ಪಡೆಯಬಹುದಿತ್ತು. ಹಲವು ವಿಚಾರಗಳಿದ್ದರೂ ನಮ್ಮ ಕಡೆಗೆ ತನಿಖೆ ಬಂದಿರುವುದು ಆಶ್ಚರ್ಯವಾಗಿದೆ ಎಂದರು.

‘ಇದು ದಾಳಿ ಅಲ್ಲ, ಸರ್ಚ್’:

ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ತಿಳಿದಿಲ್ಲದ ವಿಚಾರಗಳ ಬಗ್ಗೆ ಮಾಹಿತಿ ನೀಡಲು ಸಮಯ ಕೇಳಿದ್ದೇನೆ. ಇದು ಇಡಿ ದಾಳಿ ಅಲ್ಲ, ಸರ್ಚ್ ಅಷ್ಟೇ. ಮುಂದೆ ನೋಟಿಸ್ ನೀಡಿದರೆ ಅಗತ್ಯ ಮಾಹಿತಿ ನೀಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ವಿದೇಶಿ ಹೂಡಿಕೆ ಮಾಡಿದ್ದೀರಾ ಎಂದು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಆದರೆ, ವಿದೇಶದಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಕುರಿತು ಚಟುವಟಿಕೆಗಳು ನಡೆಯುತ್ತಿವೆ. ಈ ಸಂಬಂಧ ಇನ್ನೂ ಆರ್‌ಬಿಐನಿಂದ ಕಾನೂನುಬದ್ಧ ಅನುಮತಿ ಪಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನೋಟಿಸ್‌ನಲ್ಲಿ FEMA ಕಾಯ್ದೆಯ ಉಲ್ಲೇಖವಿದ್ದು, ಅದರ ಅಡಿಯಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ನಗದು ನಮ್ಮದೇ ಎಂದಿದ್ದೇವೆ:

ಶೋಧದ ವೇಳೆ ಸುಮಾರು ಎರಡು ಕೋಟಿವರೆಗೆ ನಗದು ಪತ್ತೆಯಾಗಿದೆ. ಆ ಹಣ ನಮ್ಮದೇ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ, ಕಾನೂನು ಪ್ರಕಾರ ಹಣವನ್ನು ಕ್ಲೈಮ್ ಮಾಡುತ್ತೇವೆ ಎಂದು ಹೇಳಿದರು.

7–8 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಅಧಿಕಾರಿಗಳು ಕೇಳಿದ ಮಾಹಿತಿಯನ್ನು ನೀಡಿದ್ದೇವೆ. ತಮ್ಮ ಮಕ್ಕಳಿಗೂ ಇಡಿ ಅಧಿಕಾರಿಗಳ ವಿಚಾರಣೆಗೆ ಸಹಕರಿಸುವಂತೆ ತಿಳಿಸಿದ್ದೇನೆ ಎಂದರು.

ದೇಶಾದ್ಯಂತ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಯುತ್ತಿದೆ ಎಂಬ ಅಭಿಪ್ರಾಯವನ್ನು ಸತೀಶ್ ಜಾರಕಿಹೊಳಿ ವ್ಯಕ್ತಪಡಿಸಿದರು.

‘ನಾನೇ ಕೊನೆಯವನು ಎಂದುಕೊಂಡಿದ್ದೆ. ಆದರೆ ನಾನೇ ಮೊದಲಿದ್ದೇನೆ. ಇನ್ನೂ ದೊಡ್ಡ ಪ್ರಕರಣಗಳಿವೆ. ಅವುಗಳನ್ನು ಬಿಟ್ಟು ನಮ್ಮ ಕಡೆಗೆ ಬಂದಿದ್ದಾರೆ. ತಮ್ಮಿಂದ ಸಣ್ಣಪುಟ್ಟ ತಪ್ಪುಗಳು ಆಗಿರಬಹುದು. ನೂರಕ್ಕೆ ನೂರು ಸರಿಯಾಗಿದ್ದೇವೆ ಎಂದು ಹೇಳುವುದಿಲ್ಲ. ಆದರೆ ಬಿಜೆಪಿಯವರ ಮೇಲೆ ಇಂತಹ ಶೋಧಗಳು ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ಸಮಾಜದಲ್ಲಿ ನಾಗೇಂದ್ರ ಅವರ ಪ್ರಕರಣದ ಬಳಿಕ ಇದೀಗ ತಮ್ಮ ಮೇಲೂ ಇಡಿ ಶೋಧ ನಡೆದಿರುವುದರಿಂದ ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.  ಇಡಿ ಅಧಿಕಾರಿಗಳು ನ್ಯಾಯಯುತವಾಗಿ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲಾ ಸ್ಥಳಗಳ ಶೋಧ ಮುಗಿದಿದ್ದು, ಶುಕ್ರವಾರ ಬೆಳಗಾವಿಗೆ ತೆರಳುತ್ತೇನೆ. ಸಾಧ್ಯವಾದರೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img