‘ಎದ್ದೇಳು ಮಂಜುನಾಥ 2’ ಸಿನಿಮಾ ಬಿಡುಗಡೆಗೆ ಸಂಕಷ್ಟ: ಕೋರ್ಟ್‌ ಮೆಟ್ಟಿಲೇರಿದ ಗುರುಪ್ರಸಾದ್‌ 2ನೇ ಪತ್ನಿ

0
Spread the love

ʻಎದ್ದೇಳು ಮಂಜುನಾಥʼ ಸಿನಿಮಾದ ಸಕ್ಸಸ್ ಬಳಿಕ ʻಎದ್ದೇಳು‌ ಮಂಜುನಾಥ 2ʼ ಸಿನಿಮಾವನ್ನು ನಿರ್ದೇಶಿಸಿದ್ದ ಗುರುಪ್ರಸಾಸ್‌ ಹೀರೋ ಕೂಡ ಆಗಿದ್ದರು. ಆದರೆ ಸಿನಿಮಾ ರಿಲೀಸ್‌ ಗೂ ಮುನ್ನವೇ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡರು. ಹೇಗೋ ಬಾಕಿ‌ ಉಳಿದಿದ್ದ ಕೆಲಸಗಳನ್ನೆಲ್ಲಾ ಪೂರ್ಣಗೊಳಿಸಿ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದ್ದರು. ಅಷ್ಟರಲ್ಲೇ ಸಿನಿಮಾ ರಿಲೀಸ್ ಮಾಡದಂತೆ ನಿರ್ಮಾಪಕರಿಗೆ, ಕೋರ್ಟ್‌ ದೊಡ್ಡ ಶಾಕ್ ನೀಡಿದೆ.

Advertisement

ʻಎದ್ದೇಳು ಮಂಜುನಾಥ 2ʼ ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆ ಆಗಬೇಕಿತ್ತು. ಆದರೆ ಈ ಸಿನಿಮಾಕ್ಕೆ ತಡೆಯಾಜ್ಞೆ ಕೋರಿ ಗುರುಪ್ರಸಾದ್ ಎರಡನೇ ಪತ್ನಿ ಸುಮಿತ್ರಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನಿಮಾ ರಿಲೀಸ್ ಆಗದಂತೆ ಸ್ಟೇ ತಂದಿದ್ದಾರೆ. ಗುರುಪ್ರಸಾದ್ ಪತ್ನಿ ಸುಮಿತ್ರಾ ಅವರ ಈ ನಡೆಗೆ ‘ಎದ್ದೇಳು ಮಂಜುನಾಥ 2’ ನಿರ್ಮಾಪಕರು ಆಕ್ರೋಶಗೊಂಡಿದ್ದು, ಹಣ ಸುಲಿಗೆ ಮಾಡಲು ಈ ರೀತಿ ಮಾಡಿದ್ದಾರೆ ಎಂದು‌ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ಮಾಪಕ ರಮೇಶ್, “ನಮ್ಮ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡದಂತೆ ಕೇವಿಯಟ್ ಅರ್ಜಿ‌ ಸಲ್ಲಿಸಿದ್ದೇವೆ. ನಿರ್ದೇಶಕ ಗುರುಪ್ರಸಾದ್ ನಮ್ಮಿಂದ ಹಣ ಪಡೆದಿದ್ದರು. ಅಲ್ಲದೇ ಸಾಯುವ ಮುನ್ನ ಸಿನಿಮಾದ ಫುಟೇಜ್‌ ಅನ್ನು ಡಿಲೀಟ್‌ ಮಾಡಿದ್ದರು. ನಾವು ಹೇಗೋ ಕಷ್ಟ ಪಟ್ಟು ಅದನ್ನು ರಿಕವರಿ ಮಾಡಿದ್ದೆವು. ಈ ಸಿನಿಮಾ ರಿಲೀಸ್ ವಿಚಾರ ವಾಣಿಜ್ಯ ಮಂಡಳಿಯಲ್ಲಿ ಒಂದು‌ ಮೀಟಿಂಗ್ ನಡೆದು ಈ‌‌ ಸಿನಿಮಾ ಲಾಭದಲ್ಲಿ 51 ಪರ್ಸೆಂಟ್‌ ಅನ್ನು ಗುರುಪ್ರಸಾದ್ ಎರಡನೇ ಪತ್ನಿಗೆ ನೀಡಬೇಕು ಎನ್ನಲಾಯಿತು. ಅದಕ್ಕೆ ನಾವು ಕೂಡ ಒಪ್ಪಿಕೊಂಡೆವು. ಈಗ ನೋಡಿದರೆ ಸುಮಿತ್ರಾ ನ್ಯಾಯಾಲಯಕ್ಕೆ ಹೋಗಿ ಸ್ಟೇ ತಂದಿದ್ದಾರೆ” ಎಂದು ಮೈಸೂರು ರಮೇಶ್ ಆಕ್ರೋಶ ಹೊರಹಾಕಿದ್ದಾರೆ.

“ಈ ಸಿನಿಮಾದಿಂದ ನನಗೆ ಸುಮಾರು ಒಂದು‌ ಕೋಟಿ ರೂ. ನಷ್ಟ ಆಗಬಹುದು. ಆದರೂ ನಾನು ಸುಮ್ಮನೆ ಆಕೆಗೆ ಹಣ ಕೊಡುವುದಿಲ್ಲ. ಸಿನಿಮಾ ಬಿಡುಗಡೆ ಆಗಲಿ, ಆಗ ಕೊಟ್ಟ ಮಾತಿನಂತೆ ನಾನು ಹಣ ಕೊಡುತ್ತೇನೆ” ಎಂದು ನಿರ್ಮಾಪಕ ಮೈಸೂರು ರಮೇಶ್ ಹೇಳಿದ್ದಾರೆ.
ಸಾವಿಗೂ ಮೊದಲು ಗುರುಪ್ರಸಾದ್ ತಮ್ಮ ಪತ್ನಿಯೊಡನೆ ಫೋನ್‌ನಲ್ಲಿ ಜಗಳವಾಡಿದ್ದ ಆಡಿಯೋ ಇದೀಗ ವೈರಲ್ ಆಗಿದೆ. ವೈರಲ್ ಆಗಿರುವ ಆಡಿಯೋದಲ್ಲಿ ಗುರುಪ್ರಸಾದ್ ಪದೇ ಪದೇ ಸಾಯುವ ಬಗ್ಗೆ ಮಾತನಾಡಿದ್ದಾರೆ. “ಸಾಯುವ ಮೊದಲು ನಿನಗೆ ಹಾಗೂ ಮಗಳಿಗೆ ದುಡ್ಡು ಮಾಡಿಟ್ಟು ಸಾಯ್ತಿನಿ” ಎಂದು ಪತ್ನಿ ಸುಮಿತ್ರಾ ಜೊತೆ ‘ಮಠ’ ಗುರುಪ್ರಸಾದ್ ಜಗಳವಾಡಿದ್ದಾರೆ‌. ಈ ಆಡಿಯೋವನ್ನು ಸ್ವತಃ ಗುರುಪ್ರಸಾದ್‌ ಅವರೇ ರೆಕಾರ್ಡ್‌ ಮಾಡಿ ಆಪ್ತರಿಗೆ ಕಳುಹಿಸಿದ್ದರಂತೆ. ಅವರ ಸಾವಿನ ನಂತರ ಈ ಆಡಿಯೋ ಕ್ಲಿಪ್ ವೈರಲ್ ಆಗಿದೆ.


Spread the love

LEAVE A REPLY

Please enter your comment!
Please enter your name here