ವಿಜಯಸಾಕ್ಷಿ ಸುದ್ದಿ, ಗದಗ : ಸರ್ಕಾರದ 19-01-2017ರ ತಿದ್ದುಪಡಿ ಆದೇಶದ ಪ್ರಕಾರ ಟೆಂಡರ್ ಜಾಹೀರಾತುಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸೋಮವಾರ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ/ಪ್ರಾದೇಶಿಕ/ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸರ್ಕಾರದ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತು ಬಿಡುಗಡೆಗೆ ಮಾರ್ಗಸೂಚಿಯುಳ್ಳ ತಿದ್ದುಪಡಿ ಆದೇಶವನ್ನು ಸರ್ಕಾರ ಹೊರಡಿಸಿದೆ. ಈ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರದೊಂದಿಗೆ ಸಲ್ಲಿಸಿ, ಸರ್ಕಾರದ ವಿವಿಧ ಇಲಾಖೆಗಳ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತು ಬಿಡುಗಡೆ ಮಾಡುವಾಗ ತಿದ್ದುಪಡಿ ಆದೇಶದಲ್ಲಿ ಸೂಚಿಸಿದ ಪ್ರಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ/ಪ್ರಾದೇಶಿಕ/ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸರ್ಕಾರದ ಎಲ್ಲಾ ಇಲಾಖೆಗಳು/ನಿಗಮ/ಮಂಡಳಿಗಳು/ಪ್ರಾಧಿಕಾರಗಳು/ಸ್ಥಳೀಯ ಸಂಸ್ಥೆಗಳು/ಜಿಲ್ಲಾ ಪಂಚಾಯತ್/ ವಿಶ್ವವಿದ್ಯಾಲಯಗಳು ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಕಛೇರಿ ಮೂಲಕ ಬಿಡುಗಡೆ ಮಾಡಬೇಕು. ಆದರೆ ಗದಗ ಜಿಲ್ಲೆಯ ಅನೇಕ ಕಛೇರಿಗಳು ಈ ತಿದ್ದುಪಡಿ ಆದೇಶ ಉಲ್ಲಂಘಿಸಿ ನೇರವಾಗಿ ರಾಜ್ಯಮಟ್ಟದ ಪತ್ರಿಕೆಗಳಿಗೆ ಟೆಂಡರ್ ಮತ್ತು ವರ್ಗೀವೃತ ಜಾಹೀರಾತುಗಳನ್ನು ಬಿಡಗಡೆ ಮಾಡುತ್ತಿವೆ.
ಇದರಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಟೆಂಡರ್ ಬಿಡುಗಡೆ ವಿಷಯದಲ್ಲಿ ತಾರತಮ್ಯ ಹಾಗೂ ಅನ್ಯಾಯವಾಗುತ್ತಿದೆ. ಈ ಕ್ರಮವು ಸರ್ಕಾರದ ತಿದ್ದುಪಡಿ ಆದೇಶಕ್ಕೆ ಸಂಪೂರ್ಣ ವಿರುದ್ದವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಂಜುನಾಥ ಅಬ್ಬಿಗೇರೆ ಮನವರಿಕೆ ಮಾಡಿಕೊಟ್ಟರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳುವುದಾಗಿ ಸಂಘದ ನಿಯೋಗಕ್ಕೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾ ಅಧಿಕಾರಿ ವಸಂತ ಮಡ್ಲೂರ, ಪತ್ರಿಕಾ ಸಂಪಾದಕರಾದ ಎಚ್.ಎಂ. ಶರೀಫ್ನವರ್, ರಾಜು ಹೆಬ್ಬಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಎನ್.ಲಿಂಗದಾಳ, ಕುನಾಲ ಅಬ್ಬಿಗೇರಿ ಉಪಸ್ಥಿತರಿದ್ದರು.
ಸರ್ಕಾರದ ತಿದ್ದುಪಡಿ ಆದೇಶದಂತೆ ಗದಗ ಜಿಲ್ಲೆಯ/ತಾಲೂಕಿನ ಸಂಬಂಧಿಸಿದ ಎಲ್ಲಾ ಕಛೇರಿಗಳು ತಮ್ಮ ಕಛೇರಿಗೆ ಸಂಬಂಧಿಸಿದ ಟೆಂಡರ್ ಮತ್ತು ವರ್ಗೀವೃತ ಜಾಹೀರಾತುಗಳನ್ನು ಕಡ್ಡಾಯವಾಗಿ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಇಲಾಖೆ ಇವರ ಮೂಲಕ ಬಿಡುಗಡೆ ಮಾಡುವಂತೆ ಸೂಚನೆ ನೀಡಿ ಸುತ್ತೋಲೆ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಂಘದ ಗದಗ ಜಿಲ್ಲಾ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷರಾದ ಜಗದೀಶ ಎಸ್.ಪಿ. ಮನವಿ ಸಲ್ಲಿಸಿದರು.