ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳ್ಳತನ, ವಾಹನ, ಮೊಬೈಲ್ ಹಾಗೂ ಇನ್ನಿತರ ಕಳ್ಳತನ, ಮೋಸ-ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 91 ಪ್ರಕರಣಗಳನ್ನು ಭೇದಿಸಿ, 2.43 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮೂಲ ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದರು.
ಬುಧವಾರ ಇಲ್ಲಿನ ನಗರದ ಸಂಭಾಪುರ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿ ಮಾತನಾಡಿದ ಅವರು, ಒಟ್ಟು 91 ಪ್ರಕರಣಕ್ಕೆ ಸಂಬಂಧಿಸಿದಂತೆ 112 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಬೇರೆ ಬೇರೆ ರಾಜ್ಯ, ಜಿಲ್ಲೆಗಳ ಕಳ್ಳರೂ ಸೇರಿದ್ದಾರೆ ಎಂದು ತಿಳಿಸಿದರು.
ಬಂಧಿತ ಒಟ್ಟೂ 112 ಆರೋಪಿಗಳಿಂದ 1.62 ಕೋಟಿ ರೂ. ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಅಂತೆಯೇ 80.80 ಲಕ್ಷ ರೂ. ಮೌಲ್ಯದ 477 ಮೊಬೈಲ್ಗಳನ್ನು ಪತ್ತೆಹಚ್ಚಲಾಗಿದೆ.
ಒಟ್ಟಾರೆ 2.43 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಮರಳಿಸಲಾಗಿದೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ 48 ಮನೆ ಕಳ್ಳತನ ಪ್ರಕರಣ, 30 ವಾಹನ ಕಳ್ಳತನ ಪ್ರಕರಣ ಹಾಗೂ 7 ಇತರೆ ಕಳ್ಳತನ ಪ್ರಕರಣ, 6 ಮೋಸ-ವಂಚನೆ ಪ್ರಕರಣ ಪತ್ತೆ ಮಾಡಲಾಗಿದೆ ಎಂದರು.
ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿಎಸ್ಪಿ ಜೆ.ಎಚ್. ಇನಾಮದಾರ, ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯ ಸಿಪಿಐ, ಪಿಎಸ್ಐ, ಅಪರಾಧ ದಳದ ಸಿಬ್ಬಂದಿ ಹಾಗೂ ಇನ್ನಿತರ ಎಲ್ಲ ಸಿಬ್ಬಂದಿಗಳ ಪ್ರಯತ್ನದಿಂದ ಅಲ್ಪ ಅವಧಿಯಲ್ಲಿ ಅನೇಕ ಪ್ರಕರಣಗಳನ್ನು ಭೇದಿಸಲು ಸಾಧ್ಯವಾಗಿದೆಸೀ ಕಾರ್ಯದಲ್ಲಿ ಯಶಸ್ವಿಯಾದ ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ಬಹುಮಾನ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಸಿಇಆರ್ ಪೋರ್ಟಲ್ ಮೂಲಕ ಗದಗ ಜಿಲ್ಲಾ ಪೊಲೀಸರು ಅತ್ಯಧಿಕ ಮೊಬೈಲ್ ಫೋನ್ಗಳನ್ನು ಕಂಡುಹಿಡಿಯುತ್ತಿದ್ದಾರೆ. ರಾಜ್ಯದಲ್ಲಿಯೇ ಟಾಪ್ 5 ಒಳಗೆ ಮೊಬೈಲ್ ಪತ್ತೆಹಚ್ಚುವಲ್ಲಿ ನಮ್ಮ ಪೊಲೀಸರು ಪ್ರಯತ್ನ ಪಟ್ಟಿದ್ದಾರೆ. ಅಂತರ್ ರಾಜ್ಯ ಹಾಗೂ ಅಂತರ ಜಿಲ್ಲಾ ಕಳ್ಳರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ಬಹುಮಾನಗಳನ್ನು ನೀಡಲಾಗುವುದು.
– ಬಿ.ಎಸ್. ನೇಮಗೌಡ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.