ವಿಜಯಸಾಕ್ಷಿ ಸುದ್ದಿ, ಗದಗ : ಪರಕೀಯರ ಆಡಳಿತ ಕಿತ್ತೊಗೆದು, ಸ್ವರಾಜ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟಪ್ರೇಮಿ, ನ್ಯಾಯವಂತ, ಜವಾಬ್ದಾರಿಯುತ, ದಕ್ಷ ಆಡಳಿತಗಾರರಾಗಿದ್ದರು ಎಂದು ಹುಲಕೋಟಿ ಸಹಕಾರ ರೇಡಿಯೋ ನಿಲಯ ನಿರ್ದೇಶಕ ಜೆ.ಕೆ. ಜಮಾದಾರ ತಿಳಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶಿವಾಜಿಯವರು ಕ್ರಿ.ಶ. ೧೬೩೦ರಲ್ಲಿ ಜನಿಸಿದರು. ತಂದೆ ಷಹಾಜಿರಾಜಿ ಭೋಸ್ಲೆ. ತಾಯಿ ಜೀಜಾಬಾಯಿ, ಶಿವಾಜಿಯ ತಾಯಿ ವೀರಮಾತೆ ಜೀಜಾಬಾಯಿಯು ಶಿವಾಜಿಗೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಹೇಳುತ್ತ ಜೀವನ ಮೌಲ್ಯಗಳ ಶಿಕ್ಷಣವನ್ನಿತ್ತಳು. ಇವರ ಗುರು ದಾದಾಜಿ ಕೊಂಡದೇವ ಶಸ್ತಾçಸ್ತç ವಿದ್ಯೆ ಕಲಿಸಿ, ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು. ಹಿಂದವೀ ಸ್ವರಾಜ್ಯ ಕಟ್ಟಬೇಕೆಂಬ ಆಕಾಂಕ್ಷೆಯಿಂದ ಮರಾಠಾ ಮುಖಂಡರನ್ನು ಮತ್ತು ಪಶ್ಚಿಮ ಘಟ್ಟಗಳ ಮಾವಳರೆಂಬ ದೃಢಕಾಯದ ಗಿರಿಜನರನ್ನು ಸೇರಿಸಿ ತರುಣರ ಪಡೆಯನ್ನು ಕಟ್ಟಿದರು. ಶಿವಾಜಿಯು ಸಂತ ರಾಮದಾಸರ ಪರಮ ಭಕ್ತನಾಗಿದ್ದರು. ಹಿಂದೂ ಧರ್ಮಕ್ಕೆ ಛತ್ರಪತಿ ಶಿವಾಜಿಯ ಕೊಡುಗೆ ಅಪಾರ. ಸ್ವಾಭಿಮಾನಿ ರಾಷ್ಟನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟಭಕ್ತ, ದಕ್ಷ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣೆ ಎಂದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ನಮನ ಸಲ್ಲಿಸಿದರು. ವಕೀಲರಾದ ಸುಧೀರ ಘೋರ್ಪಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಾಜಿ ಮಹಾರಾಜರು ದೇಶಪ್ರೇಮವನ್ನು ಬಡಿದೆಬ್ಬಿಸಿದ ಸ್ವರಾಜ್ಯ, ಸುರಾಜ್ಯ ಸ್ಥಾಪಿಸಿದ ಮೇಧಾವಿ. ಪರಕೀಯರ ಆಳ್ವಿಕೆಯಿಂದ ಸ್ವರಾಜ್ಯ ಸ್ಥಾಪಿಸಿದ ಶೂರ ಎಂದು ವಿವರಿಸಿದರು.
ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿನೀತಕುಮಾರ ಜಗತಾಪ ಮಾತನಾಡಿ, ಶಿವಾಜಿ ಮಹಾರಾಜರು ದೇಶಭಕ್ತರಾಗಿ, ರಾಷ್ಟ ಪ್ರೇಮಿಯಾಗಿ, ದಕ್ಷ ಆಡಳಿತಗಾರರಾಗಿ ಬೆಳೆಯುವಲ್ಲಿ ಅವರ ತಾಯಿಯಾದ ಜೀಜಾಬಾಯಿಯವರ ಪಾತ್ರ ಮಹತ್ವದ್ದು. ಜೀಜಾಬಾಯಿಯಂತೆ ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳನ್ನು ದೇಶಭಕ್ತರನ್ನಾಗಿ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಖಟವಟೆ, ರಾಜಮಾತಾ ಜೀಜಾಬಾಯಿ ಮಹಿಳಾ ಮಂಡಳದ ಅಧ್ಯಕ್ಷೆ ಶೃತಿ ಗ್ವಾರಿ, ಸಮಾಜದ ಗಣ್ಯರಾದ ಮೋಹನ್ ರಾವ್ ಗ್ವಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ಸೇರಿದಂತೆ ಸಮುದಾಯದ ಮುಖಂಡರು, ಹಿರಿಯರು ಹಾಜರಿದ್ದರು.
ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಂಜರಿ ಹೊಂಬಾಳಿ ನಿರೂಪಿಸಿ, ವಂದಿಸಿದರು.
ಶಿವಾಜಿ ಮಹಾರಾಜರು ಚಾಣಾಕ್ಷತೆಯಿಂದ ಅಫಜಲಖಾನ್ ಹಾಗೂ ಶಯಿಸ್ತಾಖಾನ್ನೊಂದಿಗೆ ಹೋರಾಡಿದ ಬಗೆ ಹಾಗೂ ಮೊಘಲರ ವಶದಲ್ಲಿರುವ ಸಿಂಹಗಡ, ತೋರಣಗಡ ಹೀಗೆ ಹಲವಾರು ಕೋಟೆಗಳನ್ನು ವಶಪಡಿಸಿಕೊಂಡು ಸ್ವರಾಜ್ಯ ಸ್ಥಾಪಿಸಿದ ಕುರಿತು ಜೆ.ಕೆ. ಜಮಾದಾರ ವಿವರಿಸಿದರು.