ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಆದರಹಳ್ಳಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ಸಂಸತ್ತಿನ ರಚನೆ ಮತ್ತು ಮತದಾನ ಪರಿಕಲ್ಪನೆ ಮೂಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ರಚನೆಗಾಗಿ ಚುನಾವಣೆಯನ್ನು ನಡೆಸಲಾಯಿತು.
ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆದ ಶಾಲಾ ಸಂಸತ್ತು ರಚನಾ ಪ್ರಕ್ರಿಯೆಯು ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡಿತು. ಒಂದರಿಂದ ಹತ್ತನೇ ತರಗತಿವರೆಗೆ ತಮ್ಮ ಶಾಲಾ ಸಂಸತ್ತಿನ ನಾಯಕರನ್ನು ಇವಿಎಂ ಮಷೀನ್ನಲ್ಲಿ ಮತ ಚಲಾಯಿಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು. ಕೊನೆಯಲ್ಲಿ ಚುನಾವಣೆ ನಡೆದು ಅದರಲ್ಲಿ ಹೆಚ್ಚು ಮತ ಪಡೆದ ವಿದ್ಯಾರ್ಥಿಗಳು ಜಯಗಳಿಸಿದರು. ವಿದ್ಯಾರ್ಥಿಗಳು ಸಾಲಾಗಿ ನಿಂತು ಉತ್ಸಾಹದಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಈ ವೇಳೆ ಮಾಹಿತಿ ನೀಡಿದ ಮುಖ್ಯೋಪಾಧ್ಯಾಯ ಶ್ರೀಕಾಂತ ನಂದೆಣ್ಣವರ, ಶಾಲಾ ಸಂಸತ್ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ನಡೆಯುವ ಪ್ರಜಾಪ್ರತಿನಿಧಿ ಆಯ್ಕೆ ವಿಧಾನವಾಗಿದೆ. ಮಕ್ಕಳ ಸಂಸತ್ತಿನಲ್ಲಿ ಮಕ್ಕಳೇ ಸಂಪೂರ್ಣ ಭಾಗಿದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಕಲಿಯುವುದಾಗಿದೆ ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಮಹಾಂತಗೌಡ ಪಾಟೀಲ ಮತದಾನ ನಡೆಯುವಾಗ ಭೇಟಿ ನೀಡಿ ಶಾಲಾ ಸಂಸತ್ ಚುನಾವಣೆ ನೈಜ ಚುನಾವಣಾ ಕಾರ್ಯದಂತೆಯೇ ರೂಪಿಸಿದ್ದು ಮಕ್ಕಳಿಗೆ ಪ್ರಜಾಪ್ರಭುತ್ವ, ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಪರಿಚಯವಾಗುತ್ತದೆ ಎಂದು ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹಾಜರಿದ್ದರು.