ವಿಜಯಸಾಕ್ಷಿ ಸುದ್ದಿ, ಗದಗ : ಅಖಿಲ ಭಾರತ ವೀರಶೈವ ಮಹಾಸಭಾದ ಎಲ್ಲ ಜಿಲ್ಲಾ ಕೇಂದ್ರದ ಮಹಾಸಭೆಯ ಚುನಾವಣೆಯು ಇತ್ತೀಚೆಗೆ ಜರುಗಿತು. ಅದರ ಮುಂದುವರೆದ ಭಾಗವಾಗಿ ಕರ್ನಾಟಕ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆಯ್ಕೆಗಾಗಿ ಚುನಾವಣೆ ಆಗಸ್ಟ್ 25ರ ಮುಂಜಾನೆ 8ರಿಂದ ಸಾಯಂಕಾಲ 5 ಗಂಟೆಯವಗೆಗೆ ನಗರದ ಕಾಟನ್ ಮಾರ್ಕೆಟ್ ರಸ್ತೆಯಲ್ಲಿರುವ ವೀರಶೈವ ಜನರಲ್ ಲೈಬ್ರರಿ ಆವರಣದಲ್ಲಿ ಜರುಗಲಿದೆ ಎಂದು ಮಹಾಸಭಾದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾಹಿತಿ ನೀಡಿದರು.
ಈ ಕುರಿತು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅರ್ಹ ಮತದಾರರು 561 ಇದ್ದು, ಚುನಾವಣಾ ಕಣದಲ್ಲಿ 27 ಸ್ಥಾನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ 57 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಚುನಾವಣೆಯಲ್ಲಿ ಕ್ರಮ ಸಂಖ್ಯೆ 36-ವೀರೇಶ ಶಿವಯ್ಯ ಕೂಗು (ಗದಗ), ಕ್ರಮ ಸಂಖ್ಯೆ 39-ವೀರನಗೌಡ ಬ.ಪಾಟೀಲ (ಶಿರಹಟ್ಟಿ), ಕ್ರಮ ಸಂಖ್ಯೆ 46-ಸಂಗನಗೌಡ (ಮಿಥುನ್) ಜಿ. ಪಾಟೀಲ (ರೋಣ), ಕ್ರಮ ಸಂಖ್ಯೆ 57-ಎಸ್.ಎಸ್. ಹಿರೇಮಠ (ಮುಂಡರಗಿ) ಈ ನಾಲ್ವರು ಗದಗ ಜಿಲ್ಲೆಯ ಚುನಾವಣೆಯ ಕಣದಲ್ಲಿದ್ದಾರೆ.
ಮತದಾನ ನಡೆದ ದಿನದಂದೇ ಮತಗಳ ಎಣಿಕೆಯು ಜಿಲ್ಲಾ ಕೇಂದ್ರದಲ್ಲಿ ನಡೆದು ಅಭ್ಯರ್ಥಿಗಳು ಪಡೆದ ಮತಗಳ ಅಂಕಿಯನ್ನು ರಾಜ್ಯ ಸಮಿತಿಗೆ ಕಳುಹಿಸಲಾಗುವುದು. ಅಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ಕ್ರೋಢೀಕರಣ ಮಾಡಿ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಬಿಳೆಯಲಿ, ಬಸವರಾಜ ಅಂಗಡಿ, ಕೆ.ವಿ. ಗದಗಿನ, ವಿಜಯ ಮುತ್ತಿನಪೆಂಡಿಮಠ, ಶ್ರೀಶೈಲಪ್ಪ ಚಳಗೇರಿ, ಜೀವನಗೌಡ್ರ, ಸುರೇಖಾ ಪಿಳ್ಳಿ, ವಿಜಯಲಕ್ಷ್ಮಿ ಮಾನ್ವಿ ಉಪಸ್ಥಿತರಿದ್ದರು.
ಒಬ್ಬ ಮತದಾರನು ಗರಿಷ್ಠ 27 ಅಭ್ಯರ್ಥಿಗಳ ಆಯ್ಕೆಯಾಗಿ 27 ಮತ ಚಲಾಯಿಸಲು ಅರ್ಹತೆ ಪಡೆದಿರುತ್ತಾರೆ. 27ಕ್ಕಿಂತ ಹೆಚ್ಚಿಗೆ ಮತ ಚಲಾಯಿಸಿದರೆ ಅಂತಹ ಮತಪತ್ರವನ್ನು ತಿರಸ್ಕರಿಸಲಾಗುವುದು. ಮಹಾಸಭಾದ ಸದಸ್ಯತ್ವ ಪಾವತಿ/ಗುರುತಿನ ಚೀಟಿ/ಆಧಾರ್ ಕಾರ್ಡ್/ಡ್ರೈವಿಂಗ್ ಲೈಸನ್ಸ್/ಬ್ಯಾಂಕ್ ಪಾಸ್ಬುಕ್ / ಪಾನ್ ಕಾರ್ಡ್ ಈ ಯಾವುದಾದರೂ ಒಂದು ದಾಖಲೆ ಮತದಾನಕ್ಕೆ ಅವಶ್ಯಕ ಎಂದು ಶರಣಬಸಪ್ಪ ಗುಡಿಮನಿ ತಿಳಿಸಿದರು.