ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಸಹಕಾರ ಇಲಾಖೆ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯಲ್ಲಿ ಚುನಾವಣೆ ಜರುಗಲಿರುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಡಿ.7ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ ನೆರವೇರಿಸಿ ಮಾತನಾಡಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ–1959 ಹಾಗೂ ನಿಯಮಗಳು – 1960ಕ್ಕೆ 2013ನೇಇಸ್ವಿಯಲ್ಲಿ ತಿದ್ದುಪಡಿ ತಂದು, ಸಹಕಾರ ಸಂಘಗಳು ಆಡಳಿತ ಮಂಡಲಿಗೆ ಹಾಗೂ ಪದಾಧಿಕಾರಿಗಳನ್ನು ಚುನಾಯಿಸುವ ಸಲುವಾಗಿ ಕರ್ನಾಟಕ ಸಹಕಾರ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತು. ಈಗ, ಪ್ರತಿಯೊಂದು ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಹಾಗೂ ಪದಾಧಿಕಾರಿಗಳ ಚುನಾವಣೆಗಳನ್ನು ಕರ್ನಾಟಕ ಚುನಾವಣಾ ಪ್ರಾಧಿಕಾದ ಸುಪರ್ದಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಂ.ಎಫ್. ಕಲಗುಡಿ ಮಾತನಾಡುತ್ತಾ, ಎಲ್ಲಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ನಿಯಮ 13ಡಿ(4)ರ ರೀತ್ಯಾ ಚುನಾವಣಾ ಪ್ರಾಧಿಕಾರದಿಂದ ನೇಮಕಾತಿ ಮಾಡಲ್ಪಟ್ಟ ಚುನಾವಣಾಧಿಕಾರಿಯು ಪ್ರಾಧಿಕಾರದ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ತಯಾರಿಸಿ ಅನುಮೋದಿಸಲು ಅನುವಾಗುವಂತೆ ಸಮರ್ಪಕ ಮಾಹಿತಿಯನ್ನು ಒದಗಿಸುವುದು ಆದ್ಯ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.
ಕೆ.ಸಿ.ಸಿ. ಬ್ಯಾಂಕ್ನ ಇನ್ನೊರ್ವ ನಿರ್ದೇಶಕ ಸಿ.ಬಿ. ದೊಡ್ಡಗೌಡ್ರ, ಗದಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ, ನರಗುಂದ ತಾಲೂಕಿನ ಕೆ.ಸಿ.ಸಿ. ಬ್ಯಾಂಕ್ ನಿರೀಕ್ಷಕ ಎಸ್.ವ್ಹಿ. ಸುರಕೋಡ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಡಾ. ಪ್ರಸನ್ನ ಪಟ್ಟೇದ, ಹಾಲು ಒಕ್ಕೂಟದ ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ ಹಾಗೂ ಗದಗ ತಾಲೂಕುಗಳ ವಿಸ್ತರಣಾಧಿಕಾರಿಗಳು ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಧಾರವಾಡ ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳ ಚುನಾವಣೆ ಜರುಗಿಸುವ ಕುರಿತು ಪ್ರಶಾಂತ ಮುಧೋಳ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಉಪನ್ಯಾಸ ನೀಡಿದರು.
ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ.ಯಲಿಗಾರ ವಂದಿಸಿದರು.
ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಮಾತನಾಡುತ್ತಾ, ಚುನಾವಣಾ ದಿನಾಂಕದ 60ದಿವಸಗಳ ಪೂರ್ವದಲ್ಲಿ ಕರಡು ಅರ್ಹ ಮತದಾರರು, ಅಂತಿಮ ಮತದಾರರ ಪಟ್ಟಿ ತಯಾರಿಕೆಗೆ ಮುನ್ನ ಸಾಲ ಮರುಪಾವತಿಯ ದಿನಾಂಕವಿದ್ದಲ್ಲಿ, ಸದರಿ ಮಾಹಿತಿಯನ್ನು ಒಳಗೊಂಡ ಪಟ್ಟಿ, ಸುಸ್ತಿದಾರರ ಪಟ್ಟಿ, ಅನರ್ಹ ಮತದಾರರ ಪಟ್ಟಿ ಮತ್ತು ಅನರ್ಹತೆಗೆ ಇರುವ ಕಾರಣಗಳೊಂದಿಗೆ ಪಟ್ಟಿಗಳನ್ನು ತಯಾರಿಸಿ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹೇಳಿದರು.