ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ನೇಹ, ಪ್ರೀತಿ, ಕರುಣೆ, ಗೌರವ, ವಿನಯ, ಸಹಾನುಭೂತಿ, ಪ್ರಾಮಾಣಿಕತೆ, ಧರ್ಮ, ಸಂಸ್ಕಾರ, ಸತ್ಸಂಗದಂತ ಮಾನವೀಯ ಗುಣ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಲಕ್ಷ್ಮೇಶ್ವರ ಶ್ರೀ ಸಹಸಾರ್ಜುನ ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಆರ್.ಎಂ. ಅಂಗಡಿ ಹೇಳಿದರು.
ಅವರು ಗುರುವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಪುಲಿಗೆರೆ ಪೌರ್ಣಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ತಂತ್ರಜ್ಞಾನ ಬೆಳೆದಂತೆ ಸಮಾಜದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಅತಿಯಾದ ಮೊಬೈಲ್, ಟಿವಿ ಬಳಕೆಯಿಂದ ಸಂಬಂಧಗಳ ಬಾಂಧವ್ಯ, ಸಾಮೀಪ್ಯ, ಪಾವಿತ್ರ್ಯದ ಭಾವನೆ ಕ್ಷೀಣಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗುತ್ತಿದ್ದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಸೇರಿ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಮುಖ್ಯವಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಮಾನವೀಯ ಗುಣಗಳು, ಸಂಸ್ಕಾರ, ಸಂಬಂಧಗಳು, ಗುರು-ಹಿರಿಯರು, ದೇವರು, ಧರ್ಮದ ಬಗ್ಗೆ ಗೌರವ ಭಾವನೆ ಬೆಳೆಸಬೇಕು. ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ, ಸಂಸ್ಕಾರಯುತ ಕಾರ್ಯಕ್ರಮಗಳ ಸಾಮೀಪ್ಯ ಬೆಸೆಯಬೇಕು ಎಂದರು.
ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ನ ನೂತನ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಚಂಬಣ್ಣ ಬಾಳಿಕಾಯಿ, ಬಸವೇಶ ಮಹಾಂತಶೆಟ್ಟರ, ಸಿ.ಆರ್. ಲಕ್ಕುಂಡಿಮಠ, ಸುರೇಶ ರಾಚನಾಯ್ಕರ, ನೀಲಪ್ಪ ಕರ್ಜೆಕಣ್ಣವರ, ಎಂ.ಆರ್. ಪಾಟೀಲ, ಸೋಮಶೇಖರ ಕೆರಿಮನಿ, ಬಸವರಾಜ ಪುಟಾಣಿ, ಮಯೂರಗೌಡ ಪಾಟೀಲ, ಮಾಲಾದೇವಿ ದಂಧರಗಿ, ಗೀತಾ ಮಾನ್ವಿ, ಅಶ್ವಿನಿ ಅಂಕಲಕೋಟಿ, ಸುಮಾ ಚೋಟಗಲ್, ಜ್ಯೋತಿ ಚೌಕನವರ, ವಿರೂಪಾಕ್ಷಪ್ಪ ಆದಿ, ಎಂ.ಎಸ್. ಹಿರೇಮಠ, ನಂದೀಶ ಬಂಡಿವಾಡ, ಎಸ್.ವಿ. ಕನೋಜ, ಚಂದ್ರು ನೇಕಾರ, ಜಯಪ್ರಕಾಶ ಹೊಟ್ಟಿ, ಜಿ.ಎಸ್. ಗುಡಗೇರಿ, ನಾಗರಾಜ ಕಳಸಾಪುರ, ಸ್ನೇಹಾ ಮಾಲಿಗೌಡರ ಇದ್ದರು.


