ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ನಿಟ್ಟಿನಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ-2025 ತರುತ್ತಿರುವುದರಿಂದ ರಾಜ್ಯದಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿ ಹೇರಿಕೆಯ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದಲ್ಲಿ ಬಿಜೆಪಿ ಶಿರಹಟ್ಟಿ ಮಂಡಳ, ಲಕ್ಷ್ಮೇಶ್ವರ ನಗರ ಘಟಕದ ವತಿಯಿಂದ ಸರಕಾರ ಜಾರಿಗೆ ತರುತ್ತಿರುವ ದ್ವೇಷ ಭಾಷಣ ವಿಧೇಯಕವನ್ನು ಜಾರಿಗೆ ತರದಂತೆ ಪಟ್ಟಣದ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಜನರ ವಾಕ್ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಸಿದುಕೊಳ್ಳುತ್ತಿದೆ. ಸರ್ಕಾರ ಆಡಳಿತ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇವುಗಳನ್ನು ಇಟ್ಟುಕೊಂಡು ಯಾರೂ ಸಹ ಸರಕಾರದ ವಿರುದ್ಧ ಮಾತನಾಡಬಾರದು, ಮಾತನಾಡಿದರೆ ಕೇಸು ದಾಖಲಿಸುವ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ಶಿರಹಟ್ಟಿ ಬಿಜೆಪಿ ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹಾಗೂ ಯುವ ಮುಖಂಡ ನವೀನ ಹಿರೇಮಠ ಮಾತನಾಡಿ, ಈ ವಿಧೇಯಕದಿಂದ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಇಂತಹ ನೂರು ಕಾಯ್ದೆಗಳನ್ನು ಜಾರಿಗೆ ತಂದರೂ ಸಹ ನಾವು ಹೆದರುವ ಪ್ರಶ್ನೆಯೇ ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳನ್ನಾಗಿ ಮಾಡುವ ಈ ಕೀಳು ಮಟ್ಟದ ಕಾಯ್ದೆ ಬೇಡ. ಇದರ ಬಗ್ಗೆ ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದರು.
ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಾನು ಲಮಾಣಿ, ನಿಂಗಪ್ಪ ಕರ್ಜಕಣ್ಣವರ, ಚಂಬಣ್ಣ ಬಾಳಿಕಾಯಿ, ಎಂ.ಆರ್. ಪಾಟೀಲ, ಶಿವಣ್ಣ ಲಮಾಣಿ, ಗಂಗಾಧರ ಮೆಣಸಿನಕಾಯಿ, ಬಸವರಾಜ ಚಕ್ರಸಾಲಿ, ಪ್ರವೀಣ ಬೋಮರೆ, ಮಹಾದೇವಪ್ಪ ಅಣ್ಣಿಗೇರಿ, ವಿಜಯ ಕುಂಬಾರ, ಅಶೋಕ ಶಿರಹಟ್ಟಿ, ಶಿದ್ದನಗೌಡ ಬಳ್ಳೋಳ್ಳಿ, ಈರಣ್ಣ ಪೂಜಾರ, ಭೀಮಣ್ಣ ಯಂಗಾಡಿ, ವಿನಾಯಕ ವಗ್ಗಣ್ಣವರ, ರಮೇಶ ಲಮಾಣಿ, ರಾಮು ನಾಯಕ, ಹನುಮಂತ ಜಾಲಿಮರದ, ಮಂಜುನಾಥ ಗಜಾಕೋಶ, ಪುಂಡಲೀಕ ಲಮಾಣಿ, ವಿಶಾಲ ಬಟಗುರ್ಕಿ, ಸಂತೋಷ ಜಾವೂರ, ಉಳವೇಶಗೌಡ ಪಾಟೀಲ, ರಮೇಶ ಹಾಳದೊಟದ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.
ಸಂವಿಧಾನದಲ್ಲಿ ಡಾ. ಅಂಬೇಡ್ಕರ್ ಕೊಟ್ಟಿರುವ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅಂದು ಇಂದಿರಾ ಗಾಂಧಿ ದೇಶದಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಿದ್ದರು. ಅಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಮರ್ಜೆನ್ಸಿ ಘೋಷಣೆ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶಪಡಿಸುವ ಇಂಥ ಕಾಯಿದೆ ಯಾವ ಕಾರಣಕ್ಕೂ ಜಾರಿಯಾಗಬಾರದು ಎಂದು ಶಾಸಕ ಡಾ. ಚಂದ್ರು ಲಮಾಣಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.



