ನವದೆಹಲಿ: ತುರ್ತು ಪರಿಸ್ಥಿತಿ ಕಾಂಗ್ರೆಸ್’ನ ಅಧಿಕಾರ ದಾಹದ ಅನ್ಯಾಯದ ಯುಗ ಎಂದು ದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಅವರು ಪೋಸ್ಟ್ ಮಾಡಿರುವ ಅವರು, ಪೋಸ್ಟ್ನಲ್ಲಿ, ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷ ಕಳೆದಿದೆ. ಆಳುವವರು ಸರ್ವಾಧಿಕಾರಿಗಳಾದಾಗ, ಅವರನ್ನು ಉರುಳಿಸುವ ಶಕ್ತಿಯನ್ನು ಜನರು ಹೊಂದಿರುತ್ತಾರೆ ಎಂಬುದನ್ನು ಈ ದಿನ ನೆನಪಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ತುರ್ತು ಪರಿಸ್ಥಿತಿ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ನ್ಯಾಯಾಂಗದ ಕೈಗಳನ್ನು ಕಟ್ಟಿ ಹಾಕಲಾಯಿತು. ಸಾಮಾಜಿಕ ಕಾರ್ಯಕರ್ತರನ್ನು ಜೈಲಿಗೆ ಹಾಕಲಾಯಿತು. ಈ ಸಮಯದಲ್ಲಿ ದೇಶದ ಜನ ಇಂದಿರಾ ಗಾಂಧಿಯವರ ವಿರುದ್ಧ ಅಧಿಕಾರ ತ್ಯೆಜಿಸುವಂತೆ ಧ್ವನಿ ಎತ್ತಿದರು. ಸರ್ವಾಧಿಕಾರಿ ಕಾಂಗ್ರೆಸ್ನ್ನು ಬೇರುಸಹಿತ ಕಿತ್ತುಹಾಕಿದರು. ಈ ಹೋರಾಟದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ವೀರರಿಗೆ ನಾನು ಗೌರವಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಜೂನ್ 25ನ್ನು ‘ಸಂವಿಧಾನ ಹತ್ಯೆ ದಿವಸ್’ ಎಂದು ಆಚರಿಸುವುದಾಗಿ ಅಮಿತ್ ಶಾ ಘೋಷಿಸಿದ್ದರು. ʻಸಂವಿಧಾನ ಹತ್ಯೆ ದಿವಸ್’ ಆಚರಣೆ ಪ್ರತಿಯೊಬ್ಬ ಭಾರತೀಯನಲ್ಲೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಬಗೆಗಿನ ಚಿಂತನೆಗಳನ್ನು ಜೀವಂತವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೇ ಕಾಂಗ್ರೆಸ್ನಂತಹ ಸರ್ವಾಧಿಕಾರಿ ಶಕ್ತಿಗಳ ಭಯಾನಕತೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅವರು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.