HomeGadag Newsಮನುಷ್ಯನ ಬುದ್ಧಿಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ: ರಂಭಾಪುರಿ ಶ್ರೀಗಳು

ಮನುಷ್ಯನ ಬುದ್ಧಿಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ: ರಂಭಾಪುರಿ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶ ಚಿಂತನೆಗಳ ಅವಶ್ಯಕತೆಯಿದೆ. ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮ ಚಿಂತನೆಗಳ ಅರಿವು ಅಗತ್ಯ. ತನಗಾಗಿ ಬಯಸುವುದು ಮನುಷ್ಯನ ಗುಣವಾದರೆ ಎಲ್ಲರಿಗಾಗಿ ಬಯಸುವುದು ದೇವಗುಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ಶ್ರೀ ಹಿರೇಮಠದ ಸಭಾಭವನದಲ್ಲಿ ಜರುಗಿದ ಪುರಾಣ ಪ್ರವಚನ ಮಂಗಲ ಹಾಗೂ ಸದ್ಧರ್ಮ ಧಾಮ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಹು ಜನ್ಮದ ಪುಣ್ಯದ ಫಲದಿಂದಾಗಿ ಮಾನವರಾಗಿ ಜನಿಸಿ ಬಂದಿದ್ದೇವೆ. ಅರಿವುಳ್ಳ ಜನ್ಮದಲ್ಲಿ ಬಂದ ಬಳಿಕ ಸ್ವಲ್ಪಾದರೂ ಶಿವಜ್ಞಾನ ಪ್ರಾಪ್ತಿಗಾಗಿ ಮತ್ತು ಗುರು ಕಾರುಣ್ಯಕ್ಕಾಗಿ ಶ್ರಮಿಸಬೇಕಾಗುತ್ತದೆ. ಅಧಿಕಾರದ ಅಂತಸ್ತು ಮೇಲೇರಿದಂತೆ ನೀತಿಯ ಅಂತಸ್ತು ಮೇಲೇರಬೇಕು. ಮನುಷ್ಯನ ಬುದ್ಧಿಶಕ್ತಿ ಬೆಳೆದಷ್ಟು ಭಾವನೆಗಳು ಇಂದು ಬೆಳೆಯುತ್ತಿಲ್ಲ. ಮಾತು, ಮನ, ಕೃತಿ ಒಂದಾದಾಗ ಬದುಕು ಸದೃಢಗೊಳ್ಳುತ್ತದೆ. ಬೆಳೆಯುವ ಯುವ ಜನಾಂಗದಲ್ಲಿ ಸಂಸ್ಕಾರ ಸದ್ವಿಚಾರಗಳನ್ನು ಬೆಳೆಸುವ ಕೆಲಸವಾಗಬೇಕಾಗಿದೆ. ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸಮಾಜಮುಖಿಯಾಗಿ, ಧರ್ಮಮುಖಿಯಾಗಿ ಸದಾ ಶ್ರಮಿಸುತ್ತಿರುವ ಕಾರಣ ಶ್ರೀಮಠದ ಅಭಿವೃದ್ಧಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಜಾತಿ ಧರ್ಮಗಳ ಸಂಘರ್ಷದಲ್ಲಿ ಆದರ್ಶ ಮೌಲ್ಯಗಳು ನಾಶಗೊಳ್ಳಬಾರದು ಎಂದರು.

ಸಮ್ಮುಖ ವಹಿಸಿದ್ದ ಅಬ್ಬಿಗೇರಿ-ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಸಂಪತ್ತು ಬೆಳೆದಂತೆ ಸಭ್ಯತೆ ಸಂಸ್ಕೃತಿ ಮರೆಯಬಾರದು. ದೇವರು, ಧರ್ಮ, ಗುರುವನ್ನು ಆಶ್ರಯಿಸಿ ಆದರ್ಶ ಬದುಕು ಕಟ್ಟಿಕೊಳ್ಳಬೇಕೆಂದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು.

ಇಳಕಲ್ಲ ಹಿರೇಮಠದ ಅನ್ನದಾನ ಶಾಸ್ತ್ರಿಗಳು ಪುರಾಣ ಮಂಗಲಗೊಳಿಸಿದರು. ಡಾ. ಕೆ.ಬಿ. ಧನ್ನೂರ, ವಿ.ಬಿ. ಸೋಮನಕಟ್ಟಿಮಠ, ಚಂದ್ರು ಬಾಳಿಹಳ್ಳಿಮಠ, ವೀರೇಶ ಕೂಗುಮಠ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಎಂ.ಎಸ್. ಧಡೇಸೂರಮಠ. ಬಸವರಾಜ ಕೊಳಕಣ್ಣವರ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು. ಹಿರೇಮಠದ ಸದ್ಭಕ್ತ ಮಂಡಳಿ, ಜಾತ್ರಾ ಮಹೋತ್ಸವ ಸಮಿತಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘ, ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಯವರು ಕಾರ್ಯಕ್ರಮವನ್ನು ಸಂಘಟಿಸಿದ್ದರು. ಕೆ.ಎಸ್. ಕಳಕಣ್ಣವರ ನಿರ್ವಹಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!