ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ 10-15ವರ್ಷಗಳಿಂದ ಜಿಲ್ಲೆಯಲ್ಲಿ ಪಿಯುಸಿ ಫಲಿತಾಂಶ ಕಡಿಮೆ ಆಗಲು ಉತ್ತಮ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ವಲಸೆ ಹೋಗುವುದು ಪ್ರಮುಖ ಕಾರಣವಾಗಿದ್ದು, ಇದನ್ನು ತಡೆಯಬೇಕಾಗಿದೆ. ಬೇರೆ ಜಿಲ್ಲೆಗಿಂತ ಗದಗ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಕಡಿಮೆಯೇನಿಲ್ಲ. ಆದರೆ, ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಬಳ್ಳಾರಿಯ ಚೈತನ್ಯ ಸಂಸ್ಥೆಯ ಚೇರಮನ್ ರಾಧಾಕೃಷ್ಣ ಅವರ ತತ್ವಾದರ್ಶ ಪಾಲಿಸುವ ಅವಶ್ಯಕತೆ ಇದೆ ಎಂದು ಎಸ್.ವಾಯ್. ಚಿಕ್ಕಟ್ಟಿ ಅಭಿಪ್ರಾಯಪಟ್ಟರು.
ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚೈತನ್ಯ ಶಿಕ್ಷಣ ಸಂಸ್ಥೆಯವರು 18 ಪಿಯು ಕಾಲೇಜುಗಳನ್ನು ನಡೆಸುತ್ತಿದ್ದು, ಇಲ್ಲಿ ಶಿಸ್ತು, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿ ಶಿಕ್ಷಣ ನೀಡುತ್ತಾರೆ. ರಾಧಾಕೃಷ್ಣ ಅವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. `ಕಾಲೇಜಿನ ಪ್ರಾಚಾರ್ಯರಿಗೆ ಉತ್ತಮ ವೇತನ, ಉತ್ತಮ ಶಿಕ್ಷಣ’ ಎನ್ನುವುದೇ ರಾಧಾಕೃಷ್ಣ ಅವರ ಮೂಲ ಮಂತ್ರವಾಗಿದೆ ಎಂದರು.
ಬಳ್ಳಾರಿ, ಕೊಪ್ಪಳ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದು, ರಾಧಾಕೃಷ್ಣ ಅವರು ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 1ನೇ ತಾರೀಕಿಗೆ ವೇತನ ನೀಡುತ್ತಾರೆ. ಇದರಿಂದ ಪ್ರಾಚಾರ್ಯರು ಸಂತೋಷಗೊಂಡು ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಇದರಿಂದ ಸಹಜವಾಗಿಯೇ ಫಲಿತಾಂಶ ಸುಧಾರಣೆ ಕಂಡುಕೊಳ್ಳುತ್ತದೆ ಎಂದರು.
ಚೈತನ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಮಾತನಾಡಿ, 2005ರಲ್ಲಿ 300 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಇಂದು 7000 ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದೆ. ಒಟ್ಟು 18 ಬ್ರ್ಯಾಂಚ್ಗಳನ್ನು ನಮ್ಮ ಸಂಸ್ಥೆ ಹೊಂದಿದ್ದು, ಕಾಲೇಜಿನಲ್ಲಿ ಯಾರೇ ಬಂದರೂ ಪ್ರವೇಶ ನೀಡುತ್ತೇವೆ. ಶೇ. 35 ಫಲಿತಾಂಶ ಪಡೆದವರಿಗೂ ಪ್ರವೇಶ ನೀಡಿ ಅವರಿಗೆ ಉತ್ತಮ ಶಿಕ್ಷಣ ನೀಡಿ ಪ್ರತಿ ವರ್ಷ ಶೇ.98ರಷ್ಟು ಫಲಿತಾಂಶ ಕಾಣುತ್ತಿದ್ದೇವೆ ಎಂದರು.
ಪ್ರತಿ ವರ್ಷ ಸಂಸ್ಥೆಯಿAದ ಕಲಿತು ಹೊರ ಹೊಗುವ ಸುಮಾರು 100 ವಿದ್ಯಾರ್ಥಿಗಳಿಗೆ ಮೆಡಿಕಲ್, 10-15 ಎನ್ಐಟಿ ಹಾಗೂ ನೂರಾರು ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಪ್ರವೇಶ ಸಿಗುತ್ತಿದೆ. ಪ್ರತಿ ಶನಿವಾರ ಪಿಯುಸಿ ಪರೀಕ್ಷೆ ನಡೆಸುತ್ತೇವೆ. ತಿಂಗಳಿಗೊಮ್ಮೆ ಯುನಿಟ್ ಪರೀಕ್ಷೆ, ಮೂರು ತಿಂಗಳಿಗೊಮ್ಮೆ ಪರೀಕ್ಷೆ ಅಂತಿಮವಾಗಿ ಅಗಸ್ಟ್, ಸೆಪ್ಟಂಬರ್, ಅಕ್ಟೊಬರ್ನಲ್ಲಿ ಮೂರು ಪರೀಕ್ಷೆ ನಡೆಸಿ ಸಿಇಟಿ ತರಬೇತಿ ನೀಡುತ್ತೇವೆ ಎಂದರು.
ಈ ವೇಳೆ ಪ್ರಾಚಾರ್ಯರಾದ ಶೋಭಾ, ವಿನಯ್ ಚಿಕ್ಕಟ್ಟಿ ಉಪಸ್ಥಿತರಿದ್ದರು.
ನಗರದ ಚಿಕ್ಕಟ್ಟಿ ಸಂಸ್ಥೆಯೊಂದಿಗೆ ಕೂಡಿ ಪಿಯು ಕಾಲೇಜಿಗೆ ಶಿಕ್ಷಕರನ್ನು ನಾವೇ ನೇಮಿಸುತ್ತಿದ್ದೇವೆ. ಮೊದಲು ಶಿಕ್ಷಕರನ್ನು ಪರೀಕ್ಷಿಸಿ ನಂತರ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು. ಪ್ರತಿ ವಾರ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಪಿಯುಸಿ ಪರೀಕ್ಷೆಗಳಿಗೆ ಬಳ್ಳಾರಿಯಿಂದ ಪ್ರಶ್ನೆ ಪತ್ರಿಕೆ ಕಳುಹಿಸಿ ಕೊಡುತ್ತೇವೆ.
– ಡಾ. ಪಿ.ರಾಧಾಕೃಷ್ಣ.
ಅಧ್ಯಕ್ಷರು, ಶ್ರೀ ಚೈತನ್ಯ ಸಮೂಹ
ಶಿಕ್ಷಣ ಸಂಸ್ಥೆ, ಬಳ್ಳಾರಿ.