ವಿಜಯಸಾಕ್ಷಿ ಸುದ್ದಿ, ಡಂಬಳ: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಪಾತ್ರವೂ ಮಹತ್ವದ್ದು. ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಿಲಯ ಪಾಲಕ ಎಸ್.ಎ. ಯಲ್ಲರಡ್ಡಿ ಹೇಳಿದರು.
ಡಂಬಳ ಗ್ರಾಮದ ಡಿ. ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ರವಿವಾರ ಜರುಗಿದ ಪಾಲಕರ ಸಭೆ, ಶೈಕ್ಷಣಿಕ ಚಟುವಟಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯವಾಗಿದ್ದು, ಆ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರೊ. ಆರ್.ಎಮ್. ದೊಡ್ಡಮನಿ, ಶಿಕ್ಷಕ ಆನಂದ ಆರ್ ಮಾತನಾಡಿ, ಮಕ್ಕಳ ಭವಿಷ್ಯಕ್ಕಾಗಿ ಗುರುಗಳ ಮತ್ತು ಪಾಲಕರ ನಿರಂತರ ಜವಾಬ್ದಾರಿ ಬಹಳ ಮುಖ್ಯ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡವ ಹಂಬಲತೆಯ ಮೂಲಕ ಉತ್ತಮ ಭವಿಷ್ಯ ನಿರೂಪಿಸಿಕೊಳ್ಳಲು ಶ್ರಮಿಸಬೇಕು ಎಂದು ಹೇಳಿದರು.
ವಸತಿ ನಿಲಯ ಸಿಬ್ಬಂದಿ ಈರಣ್ಣ ಬೂದಿಹಾಳ, ವಿಟ್ಟಲ್ ನಾವಳ್ಳಿ, ಪಾಲಕ ದಾನಯ್ಯ ಬೇನಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಶರಣಪ್ಪ ಶಂಸಿ, ಈರಪ್ಪ ಕೊರವರ, ನಿಂಗಪ್ಪ ಕುರಿ, ಸುಜಾತಾ ಬೆಳ್ಳಟ್ಟಿ, ಸುದಾ ಬಡಗೇರ, ರೇಣುಕಾ ಪೂಜಾರ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಇದ್ದರು.