ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಹೊಸ ಪಿಂಚಣಿ ವ್ಯವಸ್ಥೆ (ಎನ್.ಪಿ.ಎಸ್) ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ (ಒ.ಪಿ.ಎಸ್) ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘ ತಾಲೂಕಾಧ್ಯಕ್ಷ ಎಫ್.ಎಸ್. ತಳವಾರ ಹೇಳಿದರು
ಅವರು ಬುಧವಾರ ಪಟ್ಟಣದ ಅಂಚೆ ಕಚೇರಿ ಮುಂದೆ ಎನ್ಪಿಎಸ್ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪತ್ರ ಚಳುವಳಿ ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ 2 ಲಕ್ಷ 65ಸಾವಿರ ಎನ್ಪಿಎಸ್ ನೌಕರರು ಹಾಗೂ ಅಷ್ಟೇ ಸಂಖ್ಯೆಯ ನಿಗಮ ಮಂಡಳಿ ಅನುದಾನಿತ ಹಾಗೂ ಸ್ವಾಯುತ್ತ ಸಂಸ್ಥೆಗಳ ನೌಕರರು ಎನ್ಪಿಎಸ್ ರದ್ದತಿಗೆ ಎದುರು ನೋಡುತ್ತಿದ್ದು, ಸರಕಾರ ಆದಷ್ಟು ಬೇಗನೆ ರದ್ದು ಪಡಿಸಿ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸುವದಾಗಿ ಹೇಳಿದರು. ರಾಜ್ಯ ಸರಕಾರ ಚುನಾವಣಾ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಓಪಿಎಸ್ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದರೂ ಕೊಟ್ಟ ಮಾತು ಈಡೇರಿಸುವದಕ್ಕೆ ವಿಳಂಬಧೋರಣೆ ಅನುಸರಿಸುತ್ತಿರುವದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎನ್ಪಿಎಸ್ ನೌಕರರ ಸಂಘ ಗೌರವಾಧ್ಯಕ್ಷ ಮಂಜುನಾಥ ಕೊಕ್ಕರಗುಂದಿ, ಪ್ರ.ಕಾರ್ಯದರ್ಶಿ ಸಿದ್ದಪ್ಪ ಪೂಜಾರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಗುರುರಾಜ ಹವಳದ, ಶ್ರೀಕಾಂತ ನಂದೆಣ್ಣವರ, ಡಿ.ಡಿ. ಲಮಾಣಿ, ಮಂಜುನಾಥ ಚಾಕಲಬ್ಬಿ, ಎಲ್.ಎ. ನಂದೆಣ್ಣವರ, ಎಂ.ಎ. ಅಕ್ಕಿ, ಫಕ್ಕೀರೇಶ ಡಂಬಳ, ಎಚ್.ವಾಯ್. ಹಂಜಗಿ, ಬಸವರಾಜ ಹೆಬ್ಬಾಳ, ನಾಗರಾಜ ಶಿಗ್ಲಿ, ಎಂ.ಎ. ನದಾಫ್, ಬಸವರಾಜ ಯರಗುಪ್ಪಿ, ಸತೀಶ ಬೋಮಲೆ, ಬಿ.ವಿ. ಯತ್ತಿನಹಳ್ಳಿ, ಎಂ.ಎಸ್. ಹಿರೇಮಠ ಸೇರಿದಂತೆ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಎನ್ಪಿಎಸ್ ನೌಕರರ ಹಾಜರಿದ್ದರು.
ಕ.ರಾ.ಪ್ರಾ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ ಮಾತನಾಡಿ, ಈಗಾಗಲೆ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿರುವ ಸರಕಾರ ಓಪಿಎಸ್ ನೀಡುವ ಮೂಲಕ ನೌಕರರ ಮನದಲ್ಲೂ ಉಳಿಯಬೇಕು. ಎನ್ಪಿಎಸ್ ವಿರುದ್ಧ ಹೋರಾಟಕ್ಕೆ ಕರೆಕೊಟ್ಟು ರಾಜ್ಯದ ಲಕ್ಷಾಂತರ ನೌಕರರು ಮುಖ್ಯಮಂತ್ರಿಗಳಿಗೆ ಅಂಚೆ ಪತ್ರಗಳನ್ನು ಬರೆಯುವ ಚಳುವಳಿ ಆರಂಭಿಸಿದ್ದೇವೆ. ನೊಂದ ನೌಕರರಿಗೆ ಶೀಘ್ರ ಓಪಿಎಸ್ ನೀಡುವ ಕುರಿತು ಸರಕಾರ ಕ್ರಮ ಕೈಗೊಳ್ಳಬೇಕು. ಸ್ಪಂದಿಸದಿದ್ದರೆ ಫೆಬ್ರುವರಿ 7ರಂದು ಒಂದು ಲಕ್ಷಕ್ಕೂ ಹೆಚ್ಚು ನೌಕರರು ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದು ಹೇಳಿದರು.