ವಿಜಯಸಾಕ್ಷಿ ಸುದ್ದಿ, ಗದಗ: ಕೂಲಿ ಕಾರ್ಮಿಕರ ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಸಂಪನ್ಮೂಲ ಸಂರಕ್ಷಣೆ, ಮಣ್ಣು ಮತ್ತು ನೀರು ಸಂರಕ್ಷಣೆ, ಜಲ ಮೂಲಗಳ ಸಂರಕ್ಷಣೆ ಜತೆಗೆ ದುಡಿಮೆಗೆ ಉದ್ಯೋಗ ಖಾತ್ರಿ ಯೋಜನೆ ಸಾಕಷ್ಟು ನೆರವಾಗುತ್ತಿದೆ ಎಂದು ಜಿ.ಪಂ ಸಹಾಯ ನಿರ್ದೇಶಕರಾದ ಸಿ.ಆರ್. ಮುಂಡರಗಿ ಅಭಿಪ್ರಾಯಪಟ್ಟರು.
ಶುಕ್ರವಾರ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಮುದಾಯ ಬದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆರಂಭವಾಗಿರುವ ಕಂದಕ ಬದು ನಿರ್ಮಾಣದಲ್ಲಿ ಪ್ರತಿದಿನ 70 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ಮಾಣವು ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕೂಲಿ ಪಾವತಿಯಲ್ಲಿ ಗಂಡು-ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ, ಪ್ರತಿ ದಿನಕ್ಕೆ 370 ರೂ. ಕೂಲಿ ನಿಗದಿಪಡಿಸಿದೆ. ನರೇಗಾ ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ, ಆರೋಗ್ಯ ತಪಾಸಣೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಡಲಾಗಿದೆ. ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಮನೆ ತೆರೆಯಲಾಗಿದೆ. ಗ್ರಾಮಸ್ಥರು ಇದರ ಸದಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ ಮಾತನಾಡಿ, ಪ್ರತಿ ವರ್ಷ ಏಪ್ರಿಲ್ ಮೊದಲ ವಾರದಿಂದಲೇ ಗ್ರಾಮದ ಜನರಿಗೆ ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿ ಆರಂಭಿಸುವ ರೂಢಿ ಇದೆ. ಗ್ರಾಮದ ಪ್ರತಿ ಕುಟುಂಬದವರಿಗೂ ಇದು ಅನಕೂಲವಾಗಿದೆ. ಸರಕಾರ ಪಾರ್ದಶಕ ಆಡಳಿತಕ್ಕಾಗಿ ಹಲವು ಹೊಸ ಹೊಸ ಉಪ ಕ್ರಮಗಳನ್ನು ಜಾರಿಗೊಳಿಸುತ್ತುದ್ದು, ನಾವು ನೀವೆಲ್ಲ ಅವುಗಳನ್ನು ಪಾಲಿಸಿಕೊಂಡು ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಅಶೋಕ ಶಿರಹಟ್ಟಿ, ಮುತ್ತಣ್ಣ ಸುಕಂದ, ವೀರಣ್ಣ ಕೋರಿ, ಯಲ್ಲಪ್ಪ ಬೇವಿನಮರದ, ಬಕ್ಷಿ ತಹಸೀಲ್ದಾರ, ಗ್ರಾ.ಪಂ ಎಸ್ಡಿಎ ಈರಪ್ಪ ಪೂಜಾರ, ಜಿಲ್ಲಾ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ, ತಾಲೂಕು ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಬಿಎಫ್ಟಿ ಸೋಮಶೇಖರ ತರಬಿನ್, ಡಿಇಒ ಶಿವಾನಂದ ಹುಬ್ಬಳ್ಳಿ, ಮೌಲಾಸಾಬ್ ಚಲ್ಲಮರದ, ಜಿಕೆಎಂ ಜಿ.ಐ. ಕಲ್ಗುಡಿ, ಕಾಯಕ ಬಂಧುಗಳು ಇದ್ದರು.
ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಕುಮಾರ ಪೂಜಾರ ಮಾತನಾಡಿ, ಉದ್ಯೋಗ ಖಾತ್ರಿ ಸಮುದಾಯ ಕಾಮಗಾರಿಗಳ ಹಾಜರಾತಿ ಕಡ್ಡಾಯವಾಗಿ ಎನ್ಎಂಎಂಎಸ್ ತಂತ್ರಾಂಶದಲ್ಲಿ ಪ್ರತಿದಿನ ಎರಡು ಬಾರಿ ಅಳವಡಿಸಬೇಕು. ಗ್ರಾಮೀಣ ಪ್ರದೇಶದ ಬಡ ಅಕುಶಲ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ ಎಂದರು.