ವಿಜಯಸಾಕ್ಷಿ ಸುದ್ದಿ, ಗದಗ: ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಅನುಕಂಪ ಬೇಡ. ಅವರಿಗೂ ಎಲ್ಲ ರೀತಿಯ ಅವಕಾಶ ನೀಡಿದರೆ ಅವರೂ ಸಹ ಸಾಮಾನ್ಯ ಮಕ್ಕಳಂತೆ ಪ್ರತಿಭಾನ್ವಿತರಾಗಿ ಹೊರಹೊಮ್ಮುವರು ಎಂದು ಜನಚೇತನ ಶಿಕ್ಷಣ ಸಮಿತಿಯ ವ್ಯವಸ್ಥಾಪಕ ನಿರ್ದೇಶಕಿ ಡಾ. ವೇದಾ ವಿಕ್ರಮ ಬಿದರೂರ ಹೇಳಿದರು.
ಅವರು ಶನಿವಾರ ನಗರದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಪಾಲಕರು ಹೆಚ್ಚಿನ ಹಾಗೂ ವಿಶೇಷ ಕಾಳಜಿ ವಹಿಸುವುದು ಅವಶ್ಯ. ಇಂತಹ ಮಕ್ಕಳನ್ನು ಪಾಲಕರಿಗಿಂತ ಅರುಣೋದಯ ಶಾಲೆಯಲ್ಲಿ ಶಿಕ್ಷಕ-ಶಿಕ್ಷಕಿಯರು ಬಹಳಷ್ಟು ಪ್ರೀತಿಯಿಂದ ಸಂಬಾಳಿಸುವ ಮೂಲಕ ಅವರನ್ನು ಶಿಸ್ತಿಗೆ ಒಳಪಡಿಸುವಲ್ಲಿ, ನಿಯಂತ್ರಿಸುವಲ್ಲಿ ನಿಪುಣರಾಗಿದ್ದಾರೆ. ಒಂದರ್ಥದಲ್ಲಿ ಇವರುಗಳೇ ‘ರಿಯಲ್ ಹೀರೋ’ ಎಂದು ಬಣ್ಣಿಸಿದರು.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅವಶ್ಯಕವಿರುವ ಎಲ್ಲ ರೀತಿಯ ಸಹಾಯಕ ಸೌಲಭ್ಯಗಳು, ಸಲಕರಣೆಗಳು, ಆರೋಗ್ಯ ತಪಾಸಣೆ, ಫಿಜಿಯೋಥೆರಪಿ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಕ್ರಮಗಳನ್ನು ಈ ಶಾಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದು ಅಭಿನಂದನೀಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕಂಚನ್ದೇವಿ ಓಸ್ವಾಲ್ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆ ಎಂದರೆ ಅದು ದೇವರ ಸೇವೆಯೇ ಸರಿ. ಇಂತಹ ಮಕ್ಕಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ಹೊಂದುವವರಾಗುತ್ತಾರೆ ಎಂದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ನ ವಿಶ್ವಸ್ಥರಾದ ಶ್ರೀಕೃಷ್ಣ ಕುಲಕರ್ಣಿ ಅವರು ಮಾತನಾಡಿ, ಸಮಾಜಮುಖಿ ಹಾಗೂ ಜನಮುಖಿ ಕಾರ್ಯಗಳನ್ನು ಮಾಡಲು ಸ್ಥಾಪನೆಗೊಂಡಿರುವ ಸೇವಾ ಭಾರತಿ ಸಂಸ್ಥೆ ಬೇರೆ ಬೇರೆ ರೀತಿಯಲ್ಲಿ ಮಾನವೀಯ ಕಾರ್ಯಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡಿದೆ. ಹಿರಿಯ ಸಾಧಕರು ಹಾಗೂ ಅನುಭಾವಿಗಳು ಈ ಸಂಸ್ಥೆಯ ಮೂಲಕ ವಿಧಾಯಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಈ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರನ್ನು ಸೇರಿಸಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ವಿಶೇಷ ಅಗತ್ಯವುಳ್ಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಉಮೇಶ್ ಹಾದಿ ಸ್ವಾಗತಿಸಿದರು. ಕಾರ್ಯದರ್ಶಿ ಜಯರಾಜ ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಜಿತೇಂದ್ರ ಶಹಾ, ಬಸವರಾಜ ನಾಗಲಾಪೂರ, ಬಸವರಾಜ ಪಟ್ಟಣಶೆಟ್ಟಿ, ಮಂಜುನಾಥ ಚನ್ನಪ್ಪನವರ, ಮಲ್ಲಿಕಾರ್ಜುನ ಬೆಲ್ಲದ, ಮಲ್ಲಿಕಾರ್ಜುನ ನಾಗಲಾಪೂರ ಸೇರಿದಂತೆ ಪಾಲಕರು, ಶಿಕ್ಷಕ ಬಳಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ ಮಾತನಾಡಿ, ಗದಗ ಪರಿಸರದಲ್ಲಿ ಪ್ರತಿಷ್ಠಿತ ಶಾಲೆಯಾಗಿ ಹೊರಹೊಮ್ಮಿದ್ದು, ವಿಶೇಷ ಮತ್ತು ವಿಶಿಷ್ಟ ರೀತಿಯ ಕಾರ್ಯ ಮಾಡುತ್ತಿದೆ. ಈ ಶಾಲೆಗೆ ಹಲವಾರು ಸಂಘ-ಸಂಸ್ಥೆಗಳು ಹಾಗೂ ಗಣ್ಯರು ಸಹಾಯ-ಸಹಕಾರ ನೀಡುತ್ತಿರುವುದು ಅಭಿನಂದನೀಯ. ಈ ಸಹಕಾರ ಮುಂದುವರಿಯಲಿ ಎಂದು ಹೇಳಿದರು.



